ಮೈಸೂರು: ಖತರ್ನಾಕ್ ಖದೀಮರ ಗ್ಯಾಂಗ್ವೊಂದು ಯಾವುದೇ ವಾಹನ ಇಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂತಹ ಬೃಹತ್ ಜಾಲವನ್ನು ಬಯಲಿಗೆ ಎಳೆದ ನಗರದ ದೇವರಾಜ ಠಾಣೆಯ ಪೊಲೀಸರು, ಚೋಳಮಂಡಲಂ ಫೈನಾನ್ಸ್ಗೆ ದೋಖಾ ಮಾಡಿದ 15 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನಕ್ಕೀಡಾದ ಖದೀಮರ ಗ್ಯಾಂಗ್ ವಿವಿಧ ಹಣಕಾಸು ಸಂಸ್ಥೆಗಳಿಂದ ನಕಲಿ ದಾಖಲೆ ಸೃಷ್ಟಿಸಿ 1.35 ಕೋಟಿ ರೂ. ಸಾಲ ಪಡೆದಿತ್ತು. 10 ಲಾರಿಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಭಾರೀ ಪ್ರಮಾಣದ ಮೊತ್ತವನ್ನ ಸಾಲದ ರೂಪದಲ್ಲಿ ಪಡೆದು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಕೃತ್ಯ ಎಸಗಿದವರು ಮೂಲತಃ ತಮಿಳುನಾಡಿನವರು.
ಸಾಲ ನೀಡಿದ ಸಂಸ್ಥೆಗಳು, ಕಂತು ಯಾಕೆ ಪಾವತಿಸಿಲ್ಲ ಎಂದು ಕೇಳಿದ್ದರು. ಕಂತು ಪಾವತಿಸದಿದ್ದರೆ ಲಾರಿಯನ್ನು ವಶಕ್ಕೆ ಪಡೆಯುತ್ತೇವೆ ಎಂದು ಮುಂದಾದಾಗ ಅಲ್ಲಿ ವಾಹನವೇ ಇರಲಿಲ್ಲ ಎಂದು ಚೋಳಮಂಡಲಂ ಫೈನಾನ್ಸ್ ಲೋಕಲ್ ಮ್ಯಾನೇಜರ್ ವಿಜಯ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ 15 ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರಿಂದ 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್ಟಾಪ್ ಸೇರಿದಂತೆ ಅನೇಕ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು, ವಿವಿಧ ಆರ್ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವಂತೆ ನಕಲಿ ಆರ್.ಸಿ ಶೀಟ್ ಸೃಷ್ಟಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹಾಗೆಯೇ ಕರ್ನಾಟಕದ ಆರ್ಟಿಒ ಕಚೇರಿಗಳಲ್ಲಿ ವರ್ಗಾವಣೆ, ಮರು ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತಿದ್ದರು. ಆಗ ಸ್ಥಳೀಯ ವಿಳಾಸದ ನಕಲಿ ದಾಖಲೆಗಳನ್ನು ನೀಡಿ, ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
2019ರಿಂದ ಇದುವರೆಗೂ ಒಟ್ಟು 200 ನಕಲಿ ಆರ್.ಸಿ ಕಾರ್ಡ್ ಸೃಷ್ಟಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲೇ ಹಣಕಾಸು ಸಂಸ್ಥೆಗಳಿಂದ ವಾಹನ ಸಾಲ ಪಡೆಯುತ್ತಿದ್ದರು. ಈ ಹಗರಣದಲ್ಲಿ ಕರ್ನಾಟಕ ಕೆಲವು ಆರ್ಟಿಒ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಪ್ರಕರಣದ ತನಿಖೆಗಾಗಿ ಪೊಲೀಸರ ವಿಶೇಷ ತಂಡವೊಂದು ರಚನೆಯಾಗಿದೆ. ಈ ತಂಡ ತನಿಖೆಗಾಗಿ ಆಂಧ್ರದತ್ತ ದೌಡಾಯಿಸಿದೆ.