ವಿಟ್ಲ ಸಮೀಪದ ಪುಣಚದಲ್ಲಿ ಅಕ್ರಮ ಗೋಫಾರ್ಮ್ ನಿರ್ಮಾಣದ ಆರೋಪ ಕೇಳಿಬಂದಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಯ ಪ್ರಮುಖರು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು ಅವಕಾಶ ನೀಡದಂತೆ ಸ್ಥಳೀಯ ಗ್ರಾ.ಪಂ.ಗೆ ದೂರು ನೀಡಿದ್ದಾರೆ.
ಪುಣಚ ಗ್ರಾಮ ಪಂಚಾಯತ್ ಇದರ ವ್ಯಾಪ್ತಿಯ ಸರವು ಕೊಲ್ಲಪದವು ಎಂಬಲ್ಲಿ ಹಿಂದೂ ಸಂಘಟನೆಯ ಹಾಗು ಸಾರ್ವಜನಿಕರ ವಿರೋಧವಿದ್ದರೂ ಕೂಡ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸುವುದರ ಜೊತೆಗೆ ಗೋ ಫಾರ್ಮ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಕ್ರಮ ಗೋಫಾರ್ಮ್ ನಿರ್ಮಾಣದ ಬಳಿಕ ಗೋವುಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುವ ಹುನ್ನಾರ ಹೊಂದಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.
ಕರ್ನಾಟಕ ಮತ್ತು ಗಡಿಭಾಗದಲ್ಲಿ ಈ ಫಾರ್ಮ್ ನಿರ್ಮಾಣ ನಡೆಯುತ್ತಿದ್ದು, ಅಲ್ಲಿಂದ 100 ಮೀಟರ್ ಒಳಗಡೆ ಕೇರಳಕ್ಕೆ ಅಕ್ರಮ ರಸ್ತೆ ಇದೆ ಇದರ ಪರಿಣಾಮ ಯಾವಾಗ ಬೇಕಿದ್ದರು ಅಕ್ರಮವಾಗಿ ಕೇರಳಕ್ಕೆ ಗೋವನ್ನು ಸಾಗಿಸಬಹುದು ಎಂಬುದು ಸ್ಥಳೀಯರ ಆರೋಪ. ಈ ರೀತಿಯಲ್ಲಿ ಗೋವುಗಳ ಸಾಗಾಟ ನಡೆದರೆ ಮುಂದೆ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಈಗಾಗಲೇ ಪುಣಚ ಪಂಚಾಯತ್ ನಲ್ಲಿ ದೂರು ದಾಖಲಿಸಿದ್ದಾರೆ. ಆದರೂ ಕಟ್ಟಡದ ಕೆಲಸ ಮುಂದುವರಿಯುತ್ತಿದ್ದು ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಅಧಿಕಾರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.