ಅನಂತಾಡಿ ಕುಟುಂಬದ ಹಿರಿಯ ನಾಟಿ ವೈದ್ಯ ಅಳಕೆಮಜಲು ಅಂಮಣ್ಣ ಪಂಡಿತ್ (90 ವ) ನಿಧನರಾಗಿದ್ದಾರೆ. ಮಾಧ್ಯಮ ಪ್ರಶಸ್ತಿ ವಿಜೇತ ಗಡಿನಾಡ ಧ್ವನಿ ಕನ್ನಡ ಮಾಸ ಪತ್ರಿಕೆ ನೀಡಲ್ಪಡುವ ತೃತೀಯ ಕರ್ನಾಟಕ ಗಡಿನಾಡ ಸಮ್ಮೇಳನ-2013 ರ “ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ- 2013” ಪ್ರಶಸ್ತಿ ವಿಜೇತ ನಾಟಿವೈದ್ಯ ಅಂಮಣ್ಣ ಪಂಡಿತ್ರವರು ಅನಾರೋಗ್ಯದಿಂದ ಅಳಕೆಮಜಲ ಗೃಹದಲ್ಲಿ ನಿನ್ನೆ ವಿಧಿವಶರಾಗಿದ್ದಾರೆ.
ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ದರ್ಖಾಸು ದಿ. ಪಕೀರ ಪಂಡಿತ್ ಮತ್ತು ಶ್ರೀಮತಿ ಸೋಮು ದಂಪತಿಗಳ ಏಳು ಜನ ಮಕ್ಕಳಲ್ಲಿ ಪ್ರಥಮ ಪುತ್ರನಾಗಿ ಅಂಮಣ್ಣ ಪಂಡಿತ್ 1932ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಪಡೆದು ಅಂದಿನ ಕರ್ನಾಟಕ ವಿದ್ಯಚ್ಛಕ್ತಿ ಮಂಡಳಿಯ ಲೈನ್ಮೇನ್ ಆಗಿ ಸುಮಾರು ವರುಷ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ಸರಕಾರಿ ನೌಕರರಾದರೂ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು.
ತನ್ನ 13 ನೇ ವಯಸ್ಸಿನಲ್ಲಿ ಯಕ್ಷಗಾನ ರಂಗದಲ್ಲಿ ಪಳಗಿದವರು. 1952ರಲ್ಲಿ “ಶ್ರೀ ಮಹಾದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಏಮಾಜೆ ನೆಟ್ಲಮುಡ್ನೂರು” ಎಂಬ ಯಕ್ಷಗಾನ ಮೇಳವನ್ನು ಕಟ್ಟಿ ಅದೆಷೋ ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರನ್ನು ಬೆಳೆಸಿ ಕಲಾಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿದ್ದಾರೆ.
1973ರಲ್ಲಿ ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ಶ್ರೀ ಮಹಾದೇವಿ ಭಜನಾ ಮಂದಿರವನ್ನು ನಿರ್ಮಿಸಿ ಭಜಕ ವೃಂದವನ್ನು ಬೆಳೆಸುವುದರ ಜೊತೆಗೆ ಸಂಘಟನಾ ಶಕ್ತಿಯನ್ನು ಬೆಳೆಸಿದ್ದಾರೆ.
ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬ ಸೂಕ್ತಿಯಂತೆ ತಮ್ಮ ದುಡಿಮೆಯ ಪ್ರತಿಫಲವನ್ನು ಹಿಂದುಳಿದ ಬಡಜನರಿಗಾಗಿ ವಿನಿಯೋಗಿಸಿ ಸಮಾಜದ ಋಣವನ್ನು ತೀರಿಸದ ಶ್ರೇಷ್ಠ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಕಲಾಮಾತೆಯ ಆರಾಧನೆಯನ್ನು ತಾಳ ಮದ್ದಳೆ ಕೂಟವನ್ನು ಮಾಡುವುದರ ಮೂಲಕ ಸಾಂಗವಾಗಿ ನೆರವೇರಿಸಿಕೊಂಡು ಬಂದಿದ್ದಾರೆ.