ವಿಟ್ಲ: ವಿಟ್ಲ ತಾಲ್ಲೂಕು ರಚನೆ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದು, ತಾಲೂಕು ಬಗ್ಗೆ ಹೋರಾಟ ನಡೆದಿದ್ದು, ವಿಟ್ಲ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವಿ ಸಲ್ಲಿಸಿದ್ದು, ಪೂರಕ ಸ್ಪಂದನೆ ಲಭಿಸಿದೆ ಎಂದು ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ. ವಿಟ್ಲ ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣ ಪಂಚಾಯಿತಿ ಆದಾಗಿನಿಂದ ಗೊಂದಲದಲ್ಲಿರುವ ಯೋಜನಾ ಪ್ರಾಧಿಕಾರ ರಚನೆ ಸದ್ಯಕ್ಕೆ ಕಷ್ಟವಾಗಿದ್ದು, ವಿಟ್ಲ ಪ್ರದೇಶವನ್ನು ಮಂಗಳೂರು ಬದಲು ಪುತ್ತೂರು ಪ್ರಾಧಿಕಾರಕ್ಕೆ ಸೇರಿಸುವ ಬಗ್ಗೆ ಕ್ರಮಕೈಗೊಳ್ಳಲಾಗಿದ್ದು, ಪೂಡಾ ಅಧಿಕಾರಿಗಳು 3 ದಿನ ವಿಟ್ಲಕ್ಕೆ ಆಗಮಿಸಲಿದ್ದಾರೆಂದು ತಿಳಿಸಿದರು.
ಉಡುಪಿ – ಕಾಸರಗೋಡು ಸಂಪರ್ಕಿಸುವ 400ಕೆವಿ ವಿದ್ಯುತ್ ಮಾರ್ಗದ ವಿಚಾರದಲ್ಲಿ ಶಾಸಕರು ಮೌನವಾಗಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದ್ದು. ಶಾಸಕರು ಈಗಾಗಲೇ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಮಾರ್ಗ ಬದಲಾವಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಸಹಿತ ಅಧಿಕಾರಿಗಳ ಮತ್ತು ರೈತರ ಸಭೆ ನಡೆಸುವ ಭರವಸೆಯನ್ನು ನೀಡಿದ್ದಾರೆಂದು ಹೇಳಿದರು
94ಸಿ ಹಾಗೂ 94ಸಿಸಿ ಅಡಿಯಲ್ಲಿ ಜಾಗ ಮಂಜೂರಾತಿಯಲ್ಲಿ ಕನಿಷ್ಠ 3 ಸೆಂಟ್ಸ್ ಮಂಜೂರು ಮಾಡಬೇಕೆಂಬ ಬಗ್ಗೆ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದು, ಇದಕ್ಕೆ ಸೂಕ್ತ ಕ್ರಮಕಗೊಳ್ಳುವ ಭರವಸೆ ಲಭಿಸಿದೆ ಎಂದು ತಿಳಿಸಿದರು.
ಕೊಲ್ಯ ಭಾಗದಲ್ಲಿ ಎರಡು ತೋಟಗಳ ನಡುವೆ ಇಕ್ಕಟ್ಟಾದ ರಸ್ತೆಯಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ 2.50ಲಕ್ಷದ ಅನುದಾನದಲ್ಲಿ ಕಾಂಗ್ರೀಟಿಕರಣ ನಡೆಸಿದ್ದು, ಶಾಸಕರ ವಿಶೇಷ ಅನುದಾಡಿಯಲ್ಲಿ 10ಲಕ್ಷ ಈ ಭಾಗಕ್ಕೆ ಇಟ್ಟಿದ್ದು, ಸಂಪೂರ್ಣ ರಸ್ತೆ ಕಾಂಗ್ರೀಟಿಕರಣಗೊಳ್ಳಲಿದೆ. ಬರಿಮಾರಿನಿಂದ ವಿಟ್ಲಕ್ಕೆ ಸತತ ಕುಡಿಯುವ ನೀರು ಪೂರೈಕೆ ಮಾಡುವ 140ಕೋಟಿಯ ಯೋಜನೆ ಮಂಜೂರಾತಿಯಾಗಿದ್ದು, ಬಜೆಟ್ ನಲ್ಲಿ ಮಂಡನೆಯಾಗಬೇಕಾಗಿದೆ. ವಿಟ್ಲದ ಜನರಿಗೆ ಯಾರು ಏನು ಮಾಡಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿ ಇದೆ ಎಂದು ತಿಳಿಸಿದರು.
ಪುತ್ತೂರು ಗ್ರಾಮಾಂತರ ಮಂಡಲ ಸದಸ್ಯ ಮೋಹನದಾಸ ಉಕ್ಕುಡ, ಮಹಾ ಶಕ್ತಿಕೇಂದ್ರ ಪ್ರಭಾರಿ ರಾಮದಾಸ ಶೆಣೈ, ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಶಕ್ತಿಕೇಂದ್ರಗಳ ಅಧ್ಯಕ್ಷರಾದ ಹರೀಶ್ ಪೂಜಾರಿ ಸಿ.ಎಚ್, ಲೋಕನಾಥ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.