ವಿಟ್ಲ: ಭಾರೀ ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ ಅಂಗವಿಕಲ ಕಡುಬಡತನದ ವ್ಯಕ್ತಿಯೊಬ್ಬರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದು ಮನೆಮಂದಿ ಅಪಾಯದಿಂದ ಪಾರಾದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಮನೆಮಂದಿ ಸ್ಥಳಾಂತರ ಮಾಡಲಾಗಿದೆ.
ಕೊಳ್ನಾಡು ಗ್ರಾಮದ ಕಾಡುಮಠ ಕಡೆಪಿಕೇರಿ ಕೃಷ್ಣಪ್ಪ ಅವರ ಮನೆ ಮೇಲೆ ಅಪ್ಪಳಿಸಿದ ಸಿಡಿಲು ಮನೆಯನ್ನು ಸೀಳಿಕೊಂಡು ಹೋಗಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಇದರ ಜತೆಗೆ ಪಕ್ಕದ ಧರೆ ಮನೆಯ ಹಿಂಬದಿಗೆ ಉರುಳಿದ ಪರಿಣಾಮ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ.
ಮಧ್ಯ ರಾತ್ರಿ ಒಂದು ಗಂಟೆಗೆ ಈ ಘಟನೆ ಸಂಭವಿಸಿದ್ದು, ತಕ್ಷಣವೇ ಅವರ ಸಹೋದರ ಬಂದು ಮನೆಮಂದಿಯನ್ನು ತನ್ನ ಮನೆಗೆ ಸ್ಥಳಾಂತರ ಮಾಡಿದ್ದಾರೆ. ಇದರಿಂದಾಗಿ ಪ್ರಾಣಹಾನಿ ತಪ್ಪಿದೆ. ಮನೆಯೊಳಗಡೆ ಇದ್ದಂತಹ ವಿದ್ಯುತ್ ಉಪಕರಣ, ವೈಯರಿಂಗ್, ಬಟ್ಟೆ, ಬರೆ, ಪಾತ್ರೆಗಳು ಹಾನಿಗೊಂಡಿದೆ. ಮೊದಲೇ ಬಡತನದಿಂದ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಈ ಘಟನೆ ಭಾರೀ ಆಘಾತ ತಂದಿದೆ.
ಘಟನಾ ಸ್ಥಳಕ್ಕೆ ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಭಿವೃದ್ಧಿ ಅಧಿಕಾರಿ ರೋಹಿನಿ, ಸ್ಥಳೀಯ ಸದಸ್ಯರಾದ ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿ, ರೋಹಿತ್ ಅಗರಿ, ಸೌಮ್ಯಲತಾ ಕಾಡುಮಠ, ಅನಿತ, ಗ್ರಾಮಕರಣಿಕ ಅನಿಲ್ ಮೊದಲಾದವರು ಭೇಟಿ ನೀಡಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.