ವಿಟ್ಲ : ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಕಟ್ಟಿಗೆ ಸಂಗ್ರಹಿಸಿದ್ದ ಕೊಠಡಿಗೆ ಬೆಂಕಿ ಹಾಕಿದ್ದಾರೆಂದು ಆರೋಪಿಸಿ ಕೆದುಮೂಲೆ ನಿವಾಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೆದುಮೂಲೆ ನಿವಾಸಿ ಝೋರಾ ರವರು ನೀಡಿದ ದೂರಿನ ಮೇರೆಗೆ ರಝಕ್, ಮೂಸೆ ಕಲೀಂ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.26 ರಂದು ಕರೋಪ್ಪಾಡಿ ಗ್ರಾಮದ ಕೆದುಮೂಲೆ ಎಂಬಲ್ಲಿ ಮಹಿಳೆಯ ಜಾಗದಲ್ಲಿ ಹಾಕಲಾಗಿದ್ದ ಮೋರಿಯನ್ನು ನೆರೆವಾಸಿಗಳಾದ ರಝಾಕ್ ಹಾಗೂ ಮೂಸೆ ಕಲಿಂ ರವರು ತೆಗೆಯುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆಯ ತಂದೆಯನ್ನು ದೂಡಿ ಹಾಕಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಮಾ.27 ರಂದು ಆರೋಪಿಗಳು ಮಹಿಳೆಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯ ಕಿಟಕಿಯನ್ನು ಒಡೆದು ಮಹಿಳೆಯನ್ನು ಮತ್ತು ಮನೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮನೆಗೆ ತಾಗಿಕೊಂಡಿರುವ ಕಟ್ಟಿಗೆ ಸಂಗ್ರಹಿಸುವ ಕೊಠಡಿಗೆ ಬೆಂಕಿ ಹಚ್ಚಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದು , ಈ ಘಟನೆಯಿಂದ ಮಹಿಳೆ ಕಟ್ಟಿಗೆ ಸಂಗ್ರಹಿಸುವ ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ ಮನೆಯ ಕಿಟಕಿಯ ಗಾಜು ಪುಡಿಯಾಗಿ ಒಟ್ಟು 25,000/- ರೂ. ನಷ್ಟವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.