ವಿಟ್ಲ: ತವರು ಮನೆಯಿಂದ ಬಂದ ಸೊಸೆಯ ಮೇಲೆ ಗಂಡನ ಮನೆಯವರು ಹಲ್ಲೆಗೈದು, ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಪೆರಾಜೆ ಗ್ರಾಮದ ಬುಡೋಳಿಯ ಮಂಜೊಟ್ಟಿ ಎಂಬಲ್ಲಿ ನಡೆದಿದೆ.
ಬೀಪಾತುಮ್ಮ ಎಂಬವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೀಪಾತುಮ್ಮ ತನ್ನ ತಾಯಿ ಮನೆಯಾದ ಪುತ್ತೂರಿನ ಕೆಯ್ಯೂರಿನಲ್ಲಿ ವಾಸವಿದ್ದರು. ತನ್ನ ಮೊದಲ ಗಂಡ ಮಹಮ್ಮದ್ ಶರೀಫ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ಗಂಡನ ತಮ್ಮ ಆಸೀಫ್ ಇವರನ್ನು ನಿಖಾ ಆಗಿದ್ದಾರೆ. ಮೊದಲನ ಗಂಡನ ಆಸ್ಥಿ ಮಾರಾಟ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ. ನಂತರ 3 ತಿಂಗಳ ಹಿಂದೆ ವಿದೇಶಕ್ಕೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೀಪಾತುಮ್ಮ ಮತ್ತು ಆಕೆಯ ಮಕ್ಕಳನ್ನು ಗಂಡನ ಮನೆಗೆ ಬಿಡಲೆಂದು ಅಣ್ಣಂದಿರಾದ ಹಮೀದ್ ಹಾಗೂ ಇಸ್ಮಾಯಿಲ್ ಜೊತೆ ಬಂದಿದ್ದಾರೆ. ಈ ವೇಳೆ ಗಂಡನ ಮನೆಯವರು ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ.
ಘಟನೆ ವಿವರ:
ಮನೆಗೆಂದು ಬಂದಾಗ, ಮನೆಯಲ್ಲಿದ್ದ ಆಸೀಫ್ನ ತಂದೆ ಮೋನು ಬ್ಯಾರಿ, ಗಂಡನ ತಂಗಿ ಖತೀಜಾ ಗಂಡ ಬಶೀರ್ ಬೀಪಾತುಮ್ಮ ಅವರನ್ನು ಮನೆಯ ಒಳಗೆ ಹೋಗದಂತೆ ತಡೆದು, ಮೈಗೆ ಕೈಹಾಕಿ ದೂಡಿರುತ್ತಾರೆ. ಆ ಸಮಯ ಅಲ್ಲೇ ಇದ್ದ ಗಂಡನ ತಂಗಿ ಖತೀಜಾ ಚಪ್ಪಳಿಯಿಂದ ಹೊಡೆದಿದ್ದಾಳೆ. ಗಂಡನ ತಾಯಿ ( ದೂರುದಾರರ ಅತ್ತೆ) ಅಮೀನಾ ಅವಾಚ್ಯ ಪದಗಳಿಂದ ಬೈದು ನೀನು ಮತ್ತು ನಿನ್ನ ಮಕ್ಕಳು ಮನೆಗೆ ಬಂದಲ್ಲಿ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಹಲ್ಲೆಗೈದಿದ್ದಾರೆ. ಇದಕ್ಕೆಲಾ ಗಂಡನ ದುಷ್ಪ್ರೇರಣೆಯೇ ಕಾರಣ ಎಂದು ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಬೀಪಾತುಮ್ಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.