ವಿಟ್ಲ: ಮಹಿಳೆಯ ಮೇಲೆ ಯುವಕನೋರ್ವ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಮಂಗಳೂರಿಗೆ ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ಬಿ.ಸಿ ರೋಡ್ ಸಮೀಪ ತಲುಪುತ್ತಿದ್ದಂತೆ ಮಹಿಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದ್ದು ಬಂಟ್ವಾಳ ಆಸ್ಪತ್ರೆಗೆ ಸಾಗಿಸಲಾಗಿದೆ.
ವಿಟ್ಲದ ಅನಂತಾಡಿಯ ಜನಪ್ರಿಯ ಗಾಡರ್ನ್ ಬಳಿ ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಎಂಬ ಮಹಿಳೆ ಸ್ಕೂಟರ್ನಲ್ಲಿ ಹೋಗುತ್ತಿದ್ದ ವೇಳೆ ಬಂದ ವ್ಯಕ್ತಿಯೋರ್ವ ಸ್ಕೂಟರ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಮಹಿಳೆಗೆ ಚೂರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಚೂರಿ ಇರಿತಕ್ಕೆ ಕಾರಣ ಯಾವುದೆಂದು ತಿಳಿದು ಬಂದಿಲ್ಲ. ಹಲ್ಲೆಗೈದ ಯುವಕ ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳು ಏನಂತಾರೆ..?
ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳೆ ಆಕ್ಟಿವಾದಲ್ಲಿ ತೆರಳುತ್ತಿದ್ದಾ ಆಟೋದಲ್ಲಿ ಬಂದ ಯುವಕ ಜನಪ್ರಿಯ ಗಾಡರ್ನ್ ಬಳಿ ಮಹಿಳೆಯನ್ನು ತಡೆದಿದ್ದಾನೆ. ಬಳಿಕ ಅವರಿಬ್ಬರ ಮಧ್ಯೆ ಕೆಲ ಸಮಯ ವಾಗ್ವಾದ ನಡೆದಿದೆ. ಬಳಿಕ ಯುವಕ ಮಹಿಳೆಗೆ ಚೂರಿಯಿಂದ ಇರಿದಿದ್ಆನೆ. ಗಂಭೀರ ಗಾಯಗೊಂಡ ಮಹಿಳೆ ಕುಸಿದು ಬಿದ್ದು ಅಧಿಕ ರಕ್ತಸ್ರಾವವಾಗಿದೆ.