ಪವನಶಕ್ತಿಯ ಬಗೆಗಿನ ಅತ್ಯುತ್ತಮ ಸಂಶೋಧನೆಗಾಗಿ ಇರುವ IREDA – NIWE ಯ 2020ನೇ ಸಾಲಿನ ಪ್ರಶಸ್ತಿಯನ್ನು ವಿಟ್ಲ ಮೂಲದ ಸತ್ಯಭಾಮ ಅವರು ತಮ್ಮದಾಗಿಸಿಕೊಂಡಿದ್ದಾರೆ. ಕೋವಿಡ್ ಕಾರಣದಿಂದ ಮುಂದೂಡಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭ, ಈ ವರ್ಷ ಜಾಗತಿಕ ಪವನಶಕ್ತಿಯ ದಿನವಾದ ಜೂನ್ 15ರಂದು ನವದೆಹಲಿಯಲ್ಲಿ ನಡೆಯಿತು. ಕೇಂದ್ರ ಸಚಿವ ಶ್ರೀ ಆರ್ ಕೆ ಸಿಂಗ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂ ಗಳ ನಗದು ಬಹುಮಾನವನ್ನೊಳಗೊಂಡಿದೆ.
ವಿಟ್ಲದ ಆಲಂಗಾರಿನ ದಿ| ಸುಬ್ಬಣ್ಣ ಭಟ್ ಹಾಗೂ ಸಾವಿತ್ರಿಯವರ ಪುತ್ರಿಯಾಗಿರುವ ಸತ್ಯಭಾಮ, ಪ್ರಾಥಮಿಕ ಶಿಕ್ಷಣವನ್ನು ಮಾಡತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜ್ ನಲ್ಲಿ ಪಡೆದಿರುತ್ತಾರೆ. ಮಂಡ್ಯ PES ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ವಿಭಾಗದಲ್ಲಿ ಪದವಿ ಪಡೆದ ಇವರು ಸ್ನಾತಕೋತ್ತರ ಹಾಗೂ Ph D ಪದವಿಗಳನ್ನು ಸುರತ್ಕಲ್ ನ NITKಯಿಂದ ಪಡೆದಿದ್ದಾರೆ. ಪ್ರಸ್ತುತ NITKಯ ಯಾಂತ್ರಿಕ ವಿಭಾಗದಲ್ಲಿ ಅಧ್ಯಾಪಕರಾಗಿರುವ ಇವರು ಬೆಂಗಳೂರಿನ ಎಂ. ಎಸ್. ರಾಮಯ್ಯ ಕಾಲೇಜಿನಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಬೋಧನೆ ಹಾಗೂ ಸಂಶೋಧನೆಯಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿರುವ ಸತ್ಯಭಾಮ ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ 40ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಸಮ್ಮೇಳನಗಳಲ್ಲಿ 50ಕ್ಕೂ ಅಧಿಕ ಲೇಖನಗಳನ್ನು ಮಂಡಿಸಿದ್ದಾರೆ.
ಸರಕಾರದ ಅನುದಾನದಿಂದ ಹಲವಾರು ಸಂಶೋಧನಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. 2017-18ರ ಸಾಲಿನ ಕರ್ನಾಟಕ ಸರಕಾರದ ಸಂಶೋಧನಾ ಪ್ರಕಟಣೆ (Award for research Publication) ಪ್ರಶಸ್ತಿಯನ್ನು ಪಡೆದಿರುವ ಸತ್ಯಭಾಮ ಹಲವು ವಿದ್ಯಾರ್ಥಿಗಳಿಗೆ Ph D ಮಾರ್ಗದರ್ಶಕರಾಗಿದ್ದಾರೆ. ಸತ್ಯಭಾಮರ ಪತಿ ಡಾ. ರಾಮಕೃಷ್ಣ ಹೆಗಡೆಯವರು ಮಂಗಳೂರಿನ ಶ್ರೀನಿವಾಸ ಕಾಲೇಜಿನ ಆಟೋಮೊಬೈಲ್ ಹಾಗೂ ಏರೋನಾಟಿಕಲ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಹಿರಿಯ ಮಗಳು ಕೊನೆಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದರೆ, ಕಿರಿಯ ಮಗಳು 3ನೇ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.