ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಮನೆಯ ಆವರಣದಲ್ಲಿ ಮೊಟ್ಟೆಯ ಬಾಕ್ಸ್ ಇಟ್ಟ ವಿಚಾರದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ನೆಬಿಸಾ ಅವರು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಪತಿ ಮಹಮ್ಮದ್ ಅಶ್ರಫ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ವಿಟ್ಲ ಪಡ್ನೂರು ಗ್ರಾಮದ ಬಿಕ್ಕಾಜೆ ನಿವಾಸಿ, ಹಸನ್ ಯಾನೆ ಹಸ್ರನಾರ್ ಬಿಕ್ನಾಜೆ ಎನ್ನಲಾಗಿದೆ.
ನೆಬಿಸಾ ಮತ್ತು ಪತಿ ಅಶ್ರಫ್ ಅವರು ಜೀವನೋಪಾಯಕ್ಕಾಗಿ ತನ್ನ ಮನೆಯಲ್ಲಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದರು. ಇಲ್ಲಿಗೆ ಮಾರಾಟಕ್ಕೆಂದು ಮೊಟ್ಟೆ ತರಲಾಗಿತ್ತು. ಮೊಟ್ಟೆ ಮಾರಾಟಗಾರರು ಮೈಮುನಾ ಅವರ ಮನೆಯ ಆವರಣದಲ್ಲಿ ಈ ಮೊಟ್ಟೆಯ ಬಾಕ್ಸ್ ಗಳನ್ನು ಇಟ್ಟು ಹೋಗಿದ್ದರು. ಅದನ್ನು ಆಶ್ರಪ್ ಅವರ ಪತ್ನಿ ನೆಬಿಸಾ ಒಂದೊಂದು ಬಾಕ್ಸ್ ಮನೆಗೆ ತರುತ್ತಿದ್ದರು.
ಈ ಸಂದರ್ಭ ಆರೋಪಿ ಹಸನ್ ಬಿಕ್ನಾಜೆ “ಮೊಟ್ಟೆ ಇಲ್ಲಿ ಯಾಕೆ ಇಟ್ಟಿದ್ದು ಎಂದು ಗದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಮಹಿಳೆಯನ್ನು ದೂಡಿ ಹಾಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನೆಬಿಸಾ ತನ್ನ ವಿರುದ್ಧ ದೂರು ನೀಡಿದ ವಿಚಾರದಲ್ಲಿ ಆಕ್ರೋಶಗೊಂಡ ಆರೋಪಿ ಮರುದಿನ ಸಂಜೆ ನಬಿಸಾ ಅವರ ಪತಿ ಅಶ್ರಫ್, ಕೊಡಂಗಾಯಿ ಶಾಲಾ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ಹಲ್ಲೆ ನಡೆಸಿದ್ದಾರೆ ಎಂದು ಅಶ್ರಪ್ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.