ವಿಟ್ಲ: ಸುಧೃಡವಾದ ಹಿಂದೂ ಸಮಾಜದಲ್ಲಿ ಎಲ್ಲರೂ ಐಕ್ಯಮತದಿಂದ ಬೆಳೆಯಬೇಕು. ತಾಯಿ ಮಕ್ಕಳ ಸೇವೆಯೆ ಆಧ್ಯಾತ್ಮ ಬದುಕಿನ ಧ್ಯೇಯೋದ್ದೇಶವಾಗಿದೆ. ಬಾಲಭೋಜನದ ಮಕ್ಕಳ ಜೀವನ ಸಂಸ್ಕಾರಕ್ಕೆ ಮೂಲ, ಬಾಲ ಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಇಂದು ದುಶ್ಚಟ ಮುಕ್ತರಾಗಿ ಉತ್ತಮ ಉದ್ಯೋಗಗಳಲ್ಲಿದ್ದಾರೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜೀವಿತಾವಧಿಯ ತನಕ ಪ್ರತಿಯೊಬ್ಬರನ್ನೂ ಪ್ರೀತಿಸುವುದೇ ಸಂತೃಪ್ತಿ . ದೀನರ ಆರ್ತರ ಸೇವೆಯಲ್ಲಿ ಮಾತ್ರ ಆತ್ಮಾನಂದವಿದೆ. ದುರ್ಗುಣವನ್ನು ಬಿಟ್ಟು ಸದ್ಗುಣದಿಂದ ಮುಂದುವರಿಯಿರಿ. ನಿಸ್ವಾರ್ಥದಿಂದ ದೇವರಲ್ಲಿ ಬೇಡಿದಾಗ ನಿಶ್ಚಿತ ಫಲ. ದಿವ್ಯ ಚೇತನಗಳ ಮೂಲಕ ಪ್ರತೀ ಕ್ಷೇತ್ರಗಳು ಬೆಳೆಯುತ್ತದೆ. ನಿಸ್ವಾರ್ಥ ಸೇವೆಗೆ ಹೆಚ್ಚು ಫಲ. ಜನರ ನೋವಿಗೆ ಸ್ಪಂದಿಸುವುದು, ನೋವು ಅಪವಾದ ಅಪಕೀರ್ತಿಗೆ ಉತ್ತರ ಕೊಡುವುದು ನನ್ನ ಕರ್ತವ್ಯ ಎಂದು ಅವರು ಹೇಳಿದರು.
ಕೋವಿಡ್19 ಸಂದರ್ಭದಲ್ಲಿ ವಾರಿಯರ್ ಗಳಾಗಿ ಕೆಲಸ ಮಾಡಿದ ಪೆರುವಾಯಿ ಹಾಗೂ ಮಾಣಿಲ ಗ್ರಾಮದವರನ್ನು ಸನ್ಮಾನಿಸಲಾಯಿತು. ಗಣಪತಿ ಹೋಮ, ಶ್ರೀದೇವಿ ತ್ರಿಕಾಲ ಪೂಜೆ, ಶ್ರೀದುರ್ಗಾ ಹೋಮ, ಕನಕಾಧಾರಾ ಯಾಗ, ಲಕ್ಷ್ಮೀನಾರಾಯಣ ಹೃದಯ ಹೋಮ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ವರಮಹಾಲಲಕ್ಷ್ಮೀ ಪೂಜೆ, ಸಾಮೂಹಿಕ ವಾಯನ ದಾನ ಕಾರ್ಯಕ್ರಮಗಳು ನಡೆದವು.
ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಮುಂಬೈಯ ಉದ್ಯಮಿ ಬಾಸ್ಕರ ಶೆಟ್ಟಿ ಪುಣೆ, ಸಾಧ್ವಿ ವರದಮ್ಮ, ಸೌಂದರ್ಯ ಭರತ್, ಬಹರೈನ್ ಉದ್ಯಮಿ ಗಣೇಶ್ ಕುಲಾಲ್ ಮಾಣಿಲ, ಪುರುಷೋತ್ತಮ ಚೇಂಡ್ಲ, ಉಮೇಶ್ ಪೂಂಜ ಬೆಂಗಳೂರು, ಮಾಣಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಬಾಳೆಕಲ್ಲು, ಟ್ರಸ್ಟಿ ಚಂದ್ರಶೇಖರ ಮೂಲ್ಯ, ಯಮುನಾ ಬೋರ್ವೆಲ್ಸ್ ನ ಮಾಲಕ ಪುರುಷೋತ್ತಮ ಶೆಟ್ಟಿ, ಉಮೇಶ್ ಶೆಟ್ಟಿ ಬರ್ಕೆ, ಬೊಂಡಾಲ ಸತೀಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ಮಂಜು ವಿಟ್ಲ ಸ್ವಾಗತಿಸಿದರು. ಟ್ರಸ್ಟಿ ತಾರನಾಥ ಕೊಟ್ಟಾರಿ ಪ್ರಾಸ್ತಾವನೆಗೈದರು. ವಸಂತಿ ಯಶೋಧರ ಚೌಟ ಸನ್ಮಾನಿತರ ಪಟ್ಟಿ ವಾಚಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.