ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿನ 51ನೇ ವರ್ಷದ ಶ್ರೀ ಮಹಾಗಣೇಶೋತ್ಸವದ ಉದ್ಘಾಟನಾ ಸಮಾರಂಭ ನಡೆಯಿತು.
31-ರಿಂದ 2-09-2022ನೇ ಶುಕ್ರವಾರದವರೆಗೆ ನಡೆಯುವ ಇಲ್ಲಿನ ಮಹಾಗಣೇಶೋತ್ಸವವು ಅದ್ದೂರಿ ಮೆರವಣಿಗೆಯ ಮೂಲಕ ಗಣಪತಿ ವಿಗ್ರಹವನ್ನು ಧರ್ಮನಗರ ಸಮಾಜ ಮಂದಿರಕ್ಕೆ ಕರೆತರಲಾಯಿತು. ಗಣಪತಿ ಹವನ ನಡೆದು ಬಳಿಕ ಮಹಾಗಣಪತಿಯ ಪ್ರತಿಷ್ಠೆ ನಡೆಯಿತು. ಈ ಸಂದರ್ಭದಲ್ಲಿ ನೂಜಿಯಲ್ಲಿರುವ ಪುರೋಹಿತ ವೇ.ಮೂ ಗೋಪಾಲಕೃಷ್ಣ ಭಟ್ ಮಿತ್ತೂರು ವೈದಿಕ ವಿಧಿವಿಧಾನಗಳೊಂದಿಗೆ ಮೂರ್ತಿ ಪ್ರತಿಷ್ಠೆಯನ್ನು ನೇರವೇರಿಸಿದರು.
ಬಳಿಕ ಲೀಲಾವತಿ ಅಮ್ಮ, ಅಮೈ ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸತೀಶ್ ಸಪಲ್ಯ ಸಹಾಯಕ ಇಂಜಿನಿಯರ್ ಮೆಸ್ಕಾಂ-ವಿಟ್ಲ ಇವರು ದೀಪ ಬೆಳಗಿಸಿ ಕಾರ್ಯುಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಂಬಳಬೆಟ್ಟು ಇದರ ಅಧ್ಯಕ್ಷ ರಾಘವ ಎಂ, ಕೋಶಾಧಿಕಾರಿ ಸುಂದರ ಧರ್ಮನಗರ, ಕಾರ್ಯದರ್ಶಿ ಹರೀಶ ಗೌಡ ಉರಿಮಜಲು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಊರ ಭಕ್ತಾಧಿಗಳು ಪಾಲ್ಗೊಂಡಿದ್ದರು. ಪೂಜಾ ಸೇವೆ ಪ್ರಾರಂಭಗೊಂಡಿದ್ದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.