ವಿಟ್ಲ: ಹಿಂದೂ ರುದ್ರಭೂಮಿ ಮತ್ತು ಅಗ್ನಿಶಾಮಕ ದಳಕ್ಕೆ ಮೀಸಲಿಟ್ಟ ಸರಕಾರಿ ಜಮೀನನ್ನು ಅನ್ಯಮತೀಯ ವ್ಯಕ್ತಿಯೋರ್ವ ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲದೆ ಪಂ. ಕುಡಿಯುವ ನೀರಿನ ಕೊಳವೆ ಬಾವಿಯ ಪಕ್ಕದಲ್ಲೇ ರಾತ್ರೋರಾತ್ರಿ ಕೊಳವೆ ಬಾವಿ ತೆಗೆದು ವಿದ್ಯುತ್ ಸಂಪರ್ಕಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.
ಈ ಘಟನೆ ವಿಟ್ಲ ಕಸಬಾ ಗ್ರಾಮದ ವಾರ್ಡ್ ನಂ.18ರ ನೆಲ್ಲಿಗುಡ್ಡೆಯಲ್ಲಿ ನಡೆದಿದೆ. ಸ.ನಂ.273/2C ನ ಸರಕಾರಿ ಜಮೀನಲ್ಲಿ ಅತಿಕ್ರಮಣ ಮಾಡಿದ ಸುಲೈಮಾನ್ ಎಂಬಾತ ಕುಡಿಯುವ ನೀರಿನ ಪಂ. ಕೊಳವೆ ಬಾವಿಯಿಂದ ಕೇವಲ 20ಮೀಟರ್ ಅಂತರದಲ್ಲಿ ಕೊಳವೆ ಬಾವಿ ಕೊರೆಸಿದ್ದಾನೆ. ಇದಲ್ಲದೇ ಅಕ್ರಮ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಂದಿದ್ದ ಮೆಸ್ಕಾಂ ಲೈನ್ ಮ್ಯಾನ್ ಗಳನ್ನು ತರಾಟೆಗೆ ತೆಗೆದ ಸ್ಥಳೀಯರು ಓಡಿಸಿದ್ದಾರೆ.
ಜನಸಾಮಾನ್ಯರು ತಮ್ಮ ಪಟ್ಟಾ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಬೇಕಾದರೆ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆಯಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ಮೆಸ್ಕಾಂಗೆ ಸ್ಥಳೀಯ ಸಂಸ್ಥೆಗಳ ನಿರಪೇಕ್ಷಣಾ ಪತ್ರ ನೀಡಬೇಕು. ಹಾಗಾದ್ರೆ ಇವನಿಗೇನೂ ಇದೆಲ್ಲಾ ಕಾನೂನು ಅನ್ವಯಿಸುತ್ತಿಲ್ಲವೇ.? ಎಂದು ಸ್ಥಳೀಯ ಜನರು ಪ್ರಶ್ನಿಸಿದ್ದಾರೆ.
ರಾಜಕೀಯ ಒತ್ತಡ ಹಾಗೂ ಹಣದಾಸೆಗೆ ಬಲಿಬೀಳುವ ಭ್ರಷ್ಟ ಸಿಬ್ಬಂದಿಗಳು ಇಂತಹ ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆಂದು ಆರೋಪಿಸಿದ ಸ್ಥಳೀಯರು ತಹಶೀಲ್ದಾರರಿಗೆ, ಪ.ಪಂ.ಗೆ ಮತ್ತು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅತಿಕ್ರಮಣ ತಡೆದು ನ್ಯಾಯನೀಡಲು ಸಂಬಂಧಿಸಿದ ಅಧಿಕಾರಿಗಳು ವಿಫಲರಾದರೆ ಲೋಕಾಯುಕ್ತಕ್ಕೆ ದೂರು ನೀಡುವುದಲ್ಲದೇ ಉಗ್ರ ಹೋರಾಟ ನಡೆಸುತ್ತೇವೆಂದು ಸ್ಥಳೀಯರು ಎಚ್ಚರಿಸಿದ್ದಾರೆ.