ವಿಟ್ಲ: 400 ಕೆ.ವಿ ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ವಿದ್ಯುತ್ ಪ್ರಸರಣ ಮಾರ್ಗ ಮಾಡಲು ಬಂದ ಅಧಿಕಾರಿಗಳನ್ನು ಸ್ಥಳೀಯರು ವಿರೋಧಿಸಿದ ಘಟನೆ ನಡೆದಿದೆ.
ವಿಟ್ಲದ ವೀರಕಂಬ ಬೆಂಞತ್ತಿಮಾರು ಎಂಬಲ್ಲಿ ಸರ್ವೇಗೆ ಬಂದ ಸಿಬ್ಬಂದಿ ವರ್ಗದವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಜನರು ಜಮಾಯಿಸುತ್ತಿದ್ದಂತೆ ಸರ್ವೇ ಅಧಿಕಾರಿಗಳೊಂದಿಗೆ ಬಂದ ಒಂದು ಪಿಕಪ್ ಹಾಗೂ ಅದರಲ್ಲಿದ್ದ ಕೆಲಸದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಸರ್ವೇ ಮಾಡಲು ಬಂದ ಸಿಬ್ಬಂದಿಯು ಅಧಿಕಾರಿಗಳ ಅನುಮತಿಯಿದೆ ಎಂದಿದ್ದಾನೆ. ಆಗ ಸ್ಥಳೀಯರು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ. ಎಚ್ಚೆತ್ತುಕೊಂಡ ಅರಣ್ಯಾಧಿಕಾರಿ ರಾಜೇಶ್ ಬಾಳಿಗಾರ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಸರ್ಕಾರ ಕೇಳಿದರೆ ಪ್ರಾಣ ಬೇಕಾದರೂ ಕೊಟ್ಟೇವು ಆದರೆ ಜಾಗ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಮನೆ ಮಾಡಿದೆ. ಇನ್ನು 400 ಕೆ.ವಿ ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ವಿಟ್ಲದಲ್ಲಿ ನಾಡಕಛೇರಿ ಚಲೋ ಸತ್ಯಾಗ್ರಹ ನಡೆದಿತ್ತು.