




ಪೆರುವಾಯಿ: ವಿಶ್ವ ಹಿಂದೂ ಪರಿಷತ್–ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಕೈಗೆತ್ತಿಕೊಳ್ಳಲಾದ “ಆಶ್ರಯ” 4ನೇ ಸೇವಾ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಪೆರುವಾಯಿ ಗ್ರಾಮದ ಕೊಲ್ಲತ್ತಡ್ಕ ನಿವಾಸಿ ಶ್ರೀಮತಿ ರೇವತಿ ಆಚಾರ್ಯ ಅವರ ಮನೆಯ ಮೇಲ್ಚಾವಣಿ ಹಾಗೂ ಇತರೆ ಅಗತ್ಯ ದುರಸ್ತಿ ಕಾರ್ಯಗಳನ್ನು ಸಂಘಟನೆಯ ವತಿಯಿಂದ ನೆರವೇರಿಸಲಾಯಿತು. ಮಕ್ಕಳಿಲ್ಲದ ದಂಪತಿಯ ಪತಿಯ ನಿಧನದ ಬಳಿಕ ಒಂಟಿಯಾಗಿ ಜೀವನ ಸಾಗಿಸುತ್ತಿರುವ ಅವರ ಮನೆಯ ಮೇಲ್ಚಾವಣಿಯು ತೀರಾ ಹಳೆಯದಾಗಿದ್ದು, ಗಾಳಿ ಮತ್ತು ಮಳೆಯಿಂದ ಹಾನಿಗೊಳಗಾಗಿ ಕುಸಿಯುವ ಸ್ಥಿತಿಯಲ್ಲಿತ್ತು. ಈ ಸಂಕಷ್ಟಕರ ಪರಿಸ್ಥಿತಿಯನ್ನು ಮನಗಂಡು ಮಾನವೀಯ ನೆಲೆಯಲ್ಲಿ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.

ಸಮಾಜದ ಅಗತ್ಯವಿರುವ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಸಂಘಟನೆಯ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಸಂತೋಷ ಮತ್ತು ತೃಪ್ತಿಯನ್ನು ತಂದಿದೆ. ಇಂತಹ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಸುವ ಸಂಕಲ್ಪವನ್ನು ಸಂಘಟನೆಯು ವ್ಯಕ್ತಪಡಿಸಿದೆ.
ಈ ಸೇವಾ ಕಾರ್ಯವು ದಾನಿಗಳು ಹಾಗೂ ಹಿತೈಷಿಗಳ ಅಮೂಲ್ಯ ಸಹಕಾರದಿಂದ ಸಾಧ್ಯವಾಗಿದೆ. ಸಂಘಟನೆಯ ವಿವಿಧ ಕಾರ್ಯಕ್ರಮಗಳಿಗೆ ನೀವು ನೀಡುತ್ತಿರುವ ಆರ್ಥಿಕ ಮತ್ತು ನೈತಿಕ ಬೆಂಬಲವೇ ಇಂತಹ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಪ್ರೇರಣೆ ಮತ್ತು ಶಕ್ತಿಯಾಗಿದೆ. ಸಮಾಜದ ಅಗತ್ಯವಿರುವವರ ಬದುಕಿನಲ್ಲಿ ಆಶಾಕಿರಣ ಮೂಡಿಸಲು ಅವರ ಸಹಕಾರ ಮಹತ್ತರ ಪಾತ್ರ ವಹಿಸುತ್ತಿದೆ.

ಈ ಯೋಜನೆಯ ಯಶಸ್ಸಿಗೆ ನೆರವಾದ ಎಲ್ಲಾ ದಾನಿಗಳು, ಪ್ರಮುಖರು, ಕಾರ್ಯಕರ್ತ ಬಂಧುಗಳು ಹಾಗೂ ಹಿತೈಷಿಗಳಿಗೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.








