ವೀರಕಂಭ: ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2020 -21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ವೀರಕಂಭ ಶ್ರೀ ಶಾರದಾ ಮಂದಿರದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಬೆತ್ತಸರವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮೊದಲು ನಿಧನರಾದ ಸಂಘದ ನಿಕಟಪೂರ್ವ ಅಧ್ಯಕ್ಷ ದಿಲೀಪ್ ಕುಮಾರ್ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 22 ಶೇಕಡಾ ಡಿವಿಡೆಂಟ್ ಹಾಗೂ ಸಂಘದಲ್ಲಿ ದೊರೆಯುವ ಲವಣ ಮಿಶ್ರಣಕ್ಕೆ ಹತ್ತು ರೂಪಾಯಿ ರಿಯಾಯಿತಿ ಸಂಘದ ವತಿಯಿಂದ ನೀಡುವುದಾಗಿ ಸಂಘದ ಅಧ್ಯಕ್ಷರು ತಿಳಿಸಿದರು .ಹಾಗೂ ಸಂಘಕ್ಕೆ ಹಾಲು ಪೂರೈಸುತ್ತಿರುವ ಸದಸ್ಯರಿಗೆ ಪ್ರೋತ್ಸಾಹದಾಯಕವಾಗಿ ಉಚಿತವಾಗಿ ಫೈಬರ್ ಬಕೆಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ದೇವರಾಜ್ ಹಾಲಿನ ಗುಣಮಟ್ಟ ಹಾಗೂ ಪಶು ಸಾಕಣೆ ಬಗ್ಗೆ ರೈತರಿಗೆ ಕೆ ಎಂ ಎಫ್ ಹಾಗೂ ಸರಕಾರದಿಂದ ಹೈನುಗಾರಿಕೆಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಹಾಗೂ ಸಂಘದ ಕಟ್ಟಡಕ್ಕೆ ಮೇಲ್ಛಾವಣಿ ಮಾಡಿ ಸಭಾ ಕೊಠಡಿ ಮಾಡಲು ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಸಂಘದ ವರದಿಯನ್ನು ಕಾರ್ಯದರ್ಶಿ ಹರೀಶ್ ಬಂಗೇರ ವಾಚಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ತೇಜಾಕ್ಷಿ ,ನಿರ್ದೇಶಕರುಗಳಾದ ಪದ್ಮನಾಭ ಬಂಗೇರ ಮಜಿ, ಜಯಶೀಲ ಆಳ್ವ, ಉಮೇಶ ಮಜಿ, ಪದ್ಮನಾಭ ಗೌಡ ಮೈರ, ಆನಂದ ಮೂಲ್ಯ ಮೈರ, ಉಮಾವತಿ ಮಜಿ ಉಪಸ್ಥಿತರಿದ್ದರು.