ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ಶನಿವಾರ ಬೆಳ್ತಂಗಡಿ ವಿಘ್ನೇಶ್ ಸಿಟಿ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರಿದಾಸ್ ಎಸ್. ಎಂ ವಹಿಸಿ ಮಾತನಾಡುತ್ತಾ ಯಾವುದೇ ಸಂಸ್ಥೆಯು ತನ್ನ ಪ್ರಗತಿ ಸಾಧಿಸಲು ಸದಸ್ಯರು ಹಾಗೂ ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ತ್ಯಾಗ ಕಾರಣ . ನಮ್ಮ ಸಹಕಾರಿ ಸಂಘ ಇತರರಿಗೆ ಪೈಪೋಟಿ ನೀಡುವ ಬದಲಾಗಿ ಅತ್ಯಂತ ಮಹತ್ವದ ಬದಲಾವಣೆಗಾಗಿ ದುಡಿಯುತ್ತಿದೆ. ನಮ್ಮ ಸಂಘದ ನೇತೃತ್ವದಲ್ಲಿರುವ ಶ್ರಮಶಕ್ತಿ ಸ್ವಸಹಾಯ ಗುಂಪಿನ ಸದಸ್ಯರು ಜೇನು , ಕೋಳಿ, ಮೀನು ಸಾಕಾಣಿಕೆ , ಅಣಬೆ ಕೃಷಿಯ ಮೂಲಕ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ ಎಂದ ಅವರು ಬಿ.ಸಿ ರೋಡ್ ನ ಕೇಂದ್ರ ಭಾಗದಲ್ಲಿ ” ತುತ್ತು” ಎನ್ನುವ ಮನೆಯೂಟವನ್ನು ಜನವರಿ 3 ರಿಂದ ಆರಂಭಿಸಲಾಗುವುದು , ಸಾವಯವ ಕೃಷಿ ಆಧಾರಿತ ಅಕ್ಕಿ , ತರಕಾರಿಗಳಿಂದ ತಯಾರಿಸಲಾಗುವ ಮನೆಯೂಟ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭಿಸಲಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ತುತ್ತು ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗುವ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗುತ್ತದೆ ಎಂದರು.
ಉಪಾಧ್ಯಕ್ಷ , ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಜೀತ್ ಉಜಿರೆ , ಲೆಕ್ಕಪತ್ರವನ್ನು ನಿರ್ದೇಶಕಿ ಸುಕನ್ಯಾ ಹೆಚ್ , ಬೈಲ ತಿದ್ದುಪಡಿ ಬಗ್ಗೆ ಸೊಸೈಟಿಯ ವಿಶೇಷ ಅಧಿಕಾರಿ ಉಮೇಶ್ ಬಂಟ್ವಾಳ ಮಂಡಿಸಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕ ರವೀಂದ್ರ ಬಿ , ವೈಜಯಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸಂಜೀವ ಆರ್ ಉಜಿರೆ , ಶ್ರೀಮತಿ ದಿವ್ಯ ಬೆಳ್ತಂಗಡಿ , ಸುಜಾತ ಶಿರ್ಲಾಲು , ಧನ್ಯ ಲಾಯಿಲ ಸಹಕರಿಸಿದರು.
ನಿರ್ದೇಶಕ ಶಿವಕುಮಾರ್ ಎಸ್. ಎಂ ಸ್ವಾಗತಿಸಿ , ನಿರ್ದೇಶಕ ಶೇಖರ್ ಲಾಯಿಲ ಧನ್ಯವಾದವಿತ್ತರು.