ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಭದ್ರತೆಯ ಪರಿಶೀಲನೆಗಾಗಿ ಎರಡು ದಿನಗಳ ಕಾಲ ಆಯೋಜಿಸಿರುವ ಸಾಗರ ಕವಚ ಅಣಕು ಕಾರ್ಯಾಚರಣೆ ಸೋಮವಾರ ಆರಂಭಗೊಂಡಿದೆ. ಮೊದಲ ದಿನ ಕಾರವಾರ, ಗೋಕರ್ಣದಲ್ಲಿ ಒಟ್ಟೂ 21 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ವಾಣಿಜ್ಯ ಬಂದರಿನತ್ತ ಬೆಳಗ್ಗೆ ಆಗಮಿಸುತ್ತಿದ್ದ 18 ಮಂದಿ ರೆಡ್ಫೋರ್ಸ್ ಸಿಬ್ಬಂದಿಯನ್ನು ಕರಾವಳಿ ಕಾವಲುಪಡೆ ಅಧಿಕಾರಿಗಳು ವಶಕ್ಕೆ ಪಡೆದರು. ಸಂಜೆ ವೇಳೆಗೆ ಕಾಳಿ ಸೇತುವೆ ಸಮೀಪ ಇಬ್ಬರನ್ನು ನಗರ ಠಾಣೆ ಪೊಲೀಸರು ಬಂಧಿಸಿದರು. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಎದುರು ಸ್ಥಳೀಯ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದರು.
ವಾಣಿಜ್ಯ ಬಂದರು, ಮೀನುಗಾರಿಕಾ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನೌಕಾನೆಲೆ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಕಾಳಿ ಸೇತುವೆ, ಬೈತಖೋಲ, ಅರ್ಗಾ, ಮುದಗಾ ಸೇರಿ ವಿವಿಧ ಕಡೆಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ, ತಟರಕ್ಷಕ ದಳ, ಕರಾವಳಿ ಕಾವಲು ಪಡೆ, ಗುಪ್ತಚರ ದಳಗಳ ಜತೆಗೆ ನೌಕಾದಳದವರೂ ಪಾಲ್ಗೊಂಡಿದ್ದಾರೆ. ಏ.26ರ ಸಂಜೆ 5 ಗಂಟೆವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ.