ರಾಯ್ಪುರ: ಛತ್ತೀಸ್ಗಡ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ಸೋಮವಾರ ಸಿಆರ್ಪಿಎಫ್ ಸಹೋದ್ಯೋಗಿಯೊಬ್ಬರು ಗುಂಡಿನ ದಾಳಿ ನಡೆಸಿದ್ದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
ರಾಜಧಾನಿ ರಾಯ್ಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದ ಸಿಆರ್ಪಿಎಫ್ನ 50 ನೇ ಬೆಟಾಲಿಯನ್ ಶಿಬಿರದಲ್ಲಿ ಇಂದು ಮುಂಜಾನೆ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಬಸ್ತರ್ ವಲಯ) ಸುಂದರರಾಜ್ ಪಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಯೋಧ ತನ್ನ ಎಕೆ-47 ರೈಫಲ್ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಗುಂಡಿನ ದಾಳಿಗೆ ಕಾರಣ ತಿಳಿಯಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಏತನ್ಮಧ್ಯೆ, ಗಾಯಗೊಂಡ ಯೋಧರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.