





ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ(NIA) ಅಧಿಕಾರಿಗಳು ದಿಢೀರ್ ಆಗಿ ಮತ್ತೆ ಬಜಪೆ ಠಾಣೆಗೆ ಆಗಮಿಸಿದ್ದಾರೆ.
ಡಿವೈಎಸ್ಪಿ ರಾಜವ್ ಸಿಂಗ್, ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಅಧಿಕಾರಿಗಳ ತಂಡ ಮಂಗಳವಾರ ಬಜಪೆಗೆ ಆಗಮಿಸಿದೆ. ಕೆಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದೆ. ಅಧಿಕಾರಿಗಳು ಠಾಣೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ದಾಖಲಾತಿಗಳನ್ನು ಮುಂದಿಟ್ಟು ಶಂಕಿತರ ಮೇಲೆ ನಿಗಾ ಇರಿಸಿದ್ದಾರೆ
2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜಪೆ ಠಾಣೆ ವ್ಯಾಪ್ತಿಯ 14 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಒಯ್ದಿದ್ದರು. ಇದೀಗ ಒಂದು ವರ್ಷದ ಬಳಿಕ ತಂಡ ಮರಳಿದ್ದು, ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಕೆಲವರನ್ನು ವಿಚಾರಣೆಗೆ ಕರೆಸಿದೆ.
2025 ರ ಮೇ 1ರಂದು ಬಜಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ ಎಂಟು ಗಂಟೆ ವೇಳೆಗೆ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯಾಗಿತ್ತು. ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರು ಸೇರಿ 12 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಎನ್ಐಎ ತನಿಖೆಗೆ ವಹಿಸಲಾಗಿತ್ತು.








