ದಕ್ಷಿಣ ಕನ್ನಡ: ಸಿಕ್ಕಿಂನ ಸಿಂಗಮ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಬಂದು ವಾಸವಿದ್ದ ಯುವಕನನ್ನು ಸಿಕ್ಕಿಂ ಪೊಲೀಸರು ಬಂಧಿಸಿದ್ದಾರೆ. ಕಡಬಕ್ಕೆ ಬಂದ ಸಿಕ್ಕಿಂ ಪೊಲೀಸರು ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.
ಸಿಕ್ಕಿಂ ರಾಜ್ಯದ ಸಿಂಗ್ನಮ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಸಿಕ್ಕಿಂನ ಗ್ಯಾಂಗ್ಯಾಕ್ ಜಿಲ್ಲೆಯ ಸುಶೀಲ್ ಎಂಬಾತ ಅಪಹರಿಸಿರುವ ಬಗ್ಗೆ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಸಿಕ್ಕಿಂ ಪೊಲೀಸರಿಗೆ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಗೆ ಆಗಮಿಸಿದ ಸಿಕ್ಕಿಂ ಪೊಲೀಸ್ ಮಹಿಳಾ ಇನ್ಸ್ ಸ್ಪೆಕ್ಟರ್ ಶಿಲೋಶನ ಶರ್ಮಾ ನೇತೃತ್ವದ ಪೊಲೀಸರ ತಂಡ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಕನಾಯ್ಕ್ ಅವರ ಸಹಕಾರದೊಂದಿಗೆ ಕಡಬದ ಕುಂತೂರು ಎಂಬಲ್ಲಿ ಬಾಲಕಿಯನ್ನು ಪತ್ತೆಹಚ್ಚಿ, ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ಕರೆದುಕೊಂಡು ಬಂದ ಸುಶೀಲ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಯುವಕನು ಆಲಂಕಾರು ಎಂಬಲ್ಲಿ ಹೋಟೆಲ್ ಒಂದರಲ್ಲಿ ಫಾಸ್ಟ್ ಫುಡ್ ಕೆಲಸ ಮಾಡುತ್ತಿದ್ದ, ಇವರಿಬ್ಬರು ಸುಳ್ಳು ಹೆಸರುಗಳು ಹೇಳಿ ಇಲ್ಲಿ ವಾಸವಾಗಿದ್ದರು. ಸದ್ಯ ಇಬ್ಬರನ್ನೂ ಪೊಲೀಸರು ಸಿಕ್ಕಿಂಗೆ ಕರೆದುಕೊಂಡು ಹೋಗಿದ್ದಾರೆ.