ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯವಾಕ್ಯದೊಂದಿಗೆ ಸರಿಸುಮಾರು ಐದು ವರ್ಷಗಳ ಹಿಂದೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ನೂರ ಹದಿನೈದಕ್ಕೂ ಅಧಿಕ ಯೋಜನೆಗಳ ಯಶಸ್ಸಿನ ನಂತರ ಸುಬ್ರಹ್ಮಣ್ಯಕ್ಕೊಂದು ಅಂಬುಲೆನ್ಸ್ ಸೇವೆ ನೀಡುವ ಉದ್ದೇಶದೊಂದಿಗೆ ದಾನಿಗಳಿಂದ ಹಣ ಸಂಗ್ರಹ ಮಾಡಿ ಚಂಪಾ ಷಷ್ಠಿಯ ಈ ವಿಶೇಷ ದಿನವಾದ ಇಂದು ಅಂಬ್ಯುಲೆನ್ಸ್ ನ್ನು ಲೋಕಾರ್ಪಣೆ ಮಾಡಿದೆ.
ಕನಸಿನ ಈ ಹೊಸ ಯೋಜನೆಯನ್ನು ಆರಂಭಿಸಿದ ಕೇವಲ ಒಂದು ತಿಂಗಳ ಒಳಗೆ ತನ್ನ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದು ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೇ ಯೋಜನೆಗಾಗಿ ಶ್ರಮಿಸಿದ ಸಂಸ್ಥೆಯ ಜೊತೆಗೆ ಊರಿನ ಹಾಗೂ ಪರವೂರಿನ ದಾನಿಗಳೂ ಕೂಡ ಈ ಯಶಸ್ಸಿನಲ್ಲಿ ಪಾಲುದಾರರಾಗಿದ್ದು, ಇಂದಿನಿಂದ ಅಂಬ್ಯುಲೆನ್ಸ್ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಈ ಮೂಲಕ ಸುಬ್ರಮಣ್ಯ ಭಾಗದ ಜನರ ಬಹುದಿನದ ಸುಸಜ್ಜಿತ ಅಂಬ್ಯುಲೆನ್ಸ್ ಸೇವೆಯ ಬೇಡಿಕೆ ಇಂದು ನೆರವೇರಿದಂತಾಗಿದೆ.
ಸುಬ್ರಹ್ಮಣ್ಯ ಸುತ್ತಮುತ್ತಲಿನ ಸಾರ್ವಜನಿಕರು ಇನ್ನು ಮುಂದೆ ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ನ ಸೇವೆಯನ್ನು ಪಡೆಯಬಹುದಾಗಿದ್ದು, ಅಂಬ್ಯುಲೆನ್ಸ್ ಸೇವೆ ಕೇವಲ ಸುಬ್ರಹ್ಮಣ್ಯ ವ್ಯಾಪ್ತಿಗೆ ಅಷ್ಟೇ ಸೀಮಿತವಾಗದೇ ದೇಶಾದ್ಯಂತ ಓಡಾಟ ನಡೆಸಲು ಅಂಬ್ಯುಲೆನ್ಸ್ ಸರ್ವ ಸನ್ನದ್ಧವಾಗಿದೆ.
ಇಂದು ಚಂಪಾ ಷಷ್ಠಿಯ ವಿಶೇಷ ದಿನದಂದು ಅಂಬ್ಯುಲೆನ್ಸ್ ನ ಲೋಕಾರ್ಪಣೆ ವೇಳೆ ಹಲವು ಗಣ್ಯರು ಉಪಸ್ಥಿತರಿದ್ದು, ಅಂಬ್ಯುಲೆನ್ಸ್ ಸೇವೆಗೆ ಶುಭಹಾರೈಸಿದ್ದಾರೆ. ಅಂಬ್ಯುಲೆನ್ಸ್ ಲೋಕಾರ್ಪಣೆಯ ನಂತರ ಶ್ರೀ ವಿನಯ್ ಗುರೂಜಿ,ಅವಧೂತ ಸ್ವಾಮಿಗಳು ಆಂಬ್ಯುಲೆನ್ಸ್ ಚಲಾಯಿಸಿ ಶುಭಾರ್ಶೀವಾದ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಾರ್ಯನಿರವಹಣಾಧಿಕಾರಿ ಶ್ರೀ ಡಾl ನಿಂಗಯ್ಯ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀ ವತ್ಸ ಬೆಂಗಳೂರು, ಪ್ರೊಫೆಸರ್l ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷರು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ರವಿ ಕಕ್ಕೆಪದವು ಕುಕ್ಕೆ ಸುಬ್ರಹ್ಮಣ್ಯ,ಪುತ್ತೂರಿನ ಎಸ್ಆರ್ಕೆ ಲೇಡರ್ಸ್ ಮಾಲಕರು ಶ್ರೀ ಕೇಶವ ಎ.,ಡಾl ಶಿವಕುಮಾರ್ ಹೊಸೊಳಿಕೆ (ವಿಶೇಷಾಧಿಕಾರಿಗಳು, ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ),ಮಾಜಿ ತಾಲೂಕು ಪಂಚಾಯತು ಸದಸ್ಯರಾದ ಶ್ರೀ ಅಶೋಕ್ ನೆಕ್ರಾಜೆ, ಗ್ರಾಮ ಪಂಚಾಯತು ಸದಸ್ಯರುಗಳಾದ ಶ್ರೀ ಎಚ್.ಎಲ್. ವೆಂಕಟೇಶ್ ಹಾಗೂ
ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ವಿಮಲಾ ರಂಗಯ್ಯ, ಶ್ರೀಮತಿ ಪುಷ್ಪಾ ಡಿ ಕಾನತ್ತೂರು, ಶ್ರೀಮತಿ ಶ್ಯಾಮಲ ಕಲ್ಲಾಜೆ ಉಪಸ್ಥಿತರಿದ್ದರು.
ಅಲ್ಲದೇ ಅಂಬ್ಯುಲೆನ್ಸ್ ಯೋಜನೆಯ ಜೊತೆ ಸಹಕರಿಸಿದ ಅಶ್ವಮೇಧ, ಯುವ ಬ್ರಿಗೇಡ್, ಗಾಂಗೇಯ ಕ್ರಿಕೆಟರ್ಸ್, ಜೆಸಿಐ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಶ್ರೀರಾಮ್ ಕ್ರಿಕೆಟರ್ಸ್ ದೇವರಹಳ್ಳಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರು, ವರ್ತಕರ ಸಂಘದ ಪದಾಧಿಕಾರಿಗಳು, ಕುಕ್ಕೆಶ್ರೀ ಅಟೋ ಚಾಲಕ ಮಾಲಕರು, ತುಳುವಪ್ಪೆ ಜೋಕುಲು ವಾಟ್ಸಾಪ್ ಗ್ರೂಪ್, ಬಿ.ಎಮ್.ಎಸ್ ಅಟೋ ಚಾಲಕ ಮಾಲಕರು ಇದರ ಪದಾಧಿಕಾರಿಗಳು, ಯುವ ತೇಜಸ್ಸಿನ ಸದಸ್ಯರು ಹಾಗೂ ದಾನಿಗಳು ಮತ್ತು ಹಿತೈಷಿಗಳು, ಕುಕ್ಕೆ ಸುಬ್ರಹ್ಮಣ್ಯ ದೇವಳದ ಭಕ್ತಾದಿಗಳು ಕಾರ್ಯಕ್ರಮದ ಜೊತೆಗಿದ್ದು ಶುಭಹಾರೈಸಿದರು.
ಲೋಕಾರ್ಪಣೆ ಆದ ಕೆಲವೇ ಗಂಟೆಗಳೊಳಗೆ ಸುಬ್ರಹ್ಮಣ್ಯ ಸಮೀಪದ ಏನೆಕಲ್ ನ ಬೂದಿಪಳ್ಳದಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಮೂಲಕ ಯುವ ತೇಜಸ್ಸು ಅಂಬ್ಯುಲೆನ್ಸ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು ವಿಶೇಷ.
ಅಂಬ್ಯುಲೆನ್ಸ್ ರೂವಾರಿ ಗುರುಪ್ರಸಾದ್ ಪಂಜ…!!
ಯುವ ತೇಜಸ್ಸು ಬಳಗದ ಸುಬ್ರಹ್ಮಣ್ಯಕ್ಕೊಂದು ಅಂಬ್ಯುಲೆನ್ಸ್ ಯೋಜನೆಯ ರೂವಾರಿ ಗುರುಪ್ರಸಾದ್ ಪಂಜ ಅಂದರೆ ತಪ್ಪಿಲ್ಲ. ಈಗಾಗಲೇ ಪಂಜ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಶ್ರೀ ಪಂಜ ಅಂಬ್ಯುಲೆನ್ಸ್ ನ ಆರಂಭಿಕ ಜವಾಬ್ದಾರಿ ಹೊತ್ತಿದ್ದ ಗುರು ಪ್ರಸಾದ್ ಪಂಜ ಅದರ ಹಣ ಸಂಗ್ರಹ ಕಾರ್ಯದಲ್ಲಿ ತಮ್ಮ ನಿಸ್ವಾರ್ಥ ಸೇವೆ ನೀಡಿದ್ದರು.
ಇದೀಗ ಅವರದೇ ಯೋಚನೆಯಂತೆ ಸುಬ್ರಹ್ಮಣ್ಯಕ್ಕೂ ಅಂಬ್ಯುಲೆನ್ಸ್ ಸೇವೆ ಲಭಿಸಿದೆ. ಯುವ ತೇಜಸ್ಸು ಸಂಸ್ಥೆಯ ಸಕ್ರಿಯ ಸದಸ್ಯರಾಗಿರುವ ಗುರುಪ್ರಸಾದ್ ಪಂಜ ಅವರು ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಅಂಬ್ಯುಲೆನ್ಸ್ ಕೊರತೆ ಇರುವ ಬಗ್ಗೆ ಯುವ ತೇಜಸ್ಸು ಬಳಗದ ಗಮನಕ್ಕೆ ಮೊದಲು ತಂದಿದ್ದು, ಸುಬ್ರಹ್ಮಣ್ಯಕ್ಕೂ ಅಂಬ್ಯುಲೆನ್ಸ್ ಒದಗಿಸುವ ಬಗ್ಗೆ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದರು. ಗುರುಪ್ರಸಾದ್ ಪಂಜ ಅವರ ಮಾತಿಗೆ ಬೆಂಬಲ ಸೂಚಿಸಿದ ಯುವ ತೇಜಸ್ಸು ಬಳಗ ಅದಕ್ಕಾಗಿ ಸುಬ್ರಹ್ಮಣ್ಯ ಘಟಕ ಆರಂಭಿಸಿ, ಊರಿನ ಹಾಗೂ ಪರವೂರಿನ ದಾನಿಗಳಿಂದ ಅಂಬ್ಯುಲೆನ್ಸ್ ಗಾಗಿ ಧನ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡು ಇದೀಗ ಲೋಕಾರ್ಪಣೆ ಕಾರ್ಯವನ್ನೂ ನೆರವೇರಿಸಿ ಸೈ ಅನಿಸಿಕೊಂಡಿದೆ.
ಅಂಬ್ಯುಲೆನ್ಸ್ ಸೇವೆ ಆರಂಭಕ್ಕೆ TEAM EFFORT ಎಂಬ ಹೆಗ್ಗಳಿಕೆ ಯುವ ತೇಜಸ್ಸು ಬಳಗದದ್ದೇ ಆದರೂ ಹಗಲಿರುಳು ಅಂಬ್ಯುಲೆನ್ಸ್ ಗಾಗಿ ದುಡಿದ ಗುರುಪ್ರಸಾದ್ ಅವರ ನಿಸ್ವಾರ್ಥ ಮನಸ್ಸಿನ ಬಗ್ಗೆ ಹಲವರಿಗೆ ಗೊತ್ತಿರಲಿಕ್ಕಿಲ್ಲ. ತಾನೆಷ್ಟೇ ದುಡಿದರೂ ತೆರೆಮರೆಯಲ್ಲಿ ನಿಂತು ಇತರರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವ ಗುರುಪ್ರಸಾದ್ ಪಂಜ ಯುವ ತೇಜಸ್ಸು ಬಳಗದ ಟ್ರಂಪ್ ಕಾರ್ಡ್.