ಸುರತ್ಕಲ್ : ಯೋಧನ ಕುಟುಂಬದ ಮೇಲೆ ಅಶೋಕ್ ರೈ ಅಟ್ಟಹಾಸ. ಯೋಧನಿಗೆ ಸೇರಿದ ಕಟ್ಟಡವನ್ನು ಧ್ವಂಸಗೊಳಿಸಿದ ಅಶೋಕ್ ರೈ, ಯಾವುದೇ ದಾಖಲೆ ನೀಡದೇ ಯೋಧನ ಕಟ್ಟಡ ನೆಲಸಮ, ಅಶೋಕ್ ರೈ ಗೂಂಡಾ ವರ್ತನೆಗೆ ಯೋಧನ ಪತ್ನಿ ಕಣ್ಣೀರು, ಅಂತೆಲ್ಲಾ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದು, ಈ ಘಟನೆ ಕುರಿತು ಅಶೋಕ್ ರೈ ಸ್ಪಷ್ಟನೆ ನೀಡಿದ್ದಾರೆ. ಬಾಳ ಗ್ರಾಮ ಪಂಚಾಯತ್ನ ವ್ಯಾಪ್ತಿಯಲ್ಲಿ ಕಟ್ಟಡ ಸಂಖ್ಯೆ, ಪರವಾನಿಗೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪಂಚಾಯತ್ನಿಂದ ಅಶೋಕ್ ರೈ ಅವರಿಗೆ ನೋಟಿಸ್ ಬಂದಿದ್ದು, ಅದರ ಅನ್ವಯ ಕಟ್ಟಡವನ್ನು ತೆರವುಗೊಳಿಸಿದರು.
ಅಶೋಕ್ ರೈ ಸ್ಪಷ್ಟನೆ:
ಭಾರತೀಯ ಸೇನೆಯನ್ನು, ಭಾರತೀಯ ಯೋಧರನ್ನು, ಸೈನಿಕರನ್ನು ಅಪಾರವಾಗಿ ಗೌರವಿಸುವ, ಪ್ರೀತಿಸುವ ನನ್ನ ಮೇಲೆ ಇಂಥದ್ದೊಂದು ಆಪಾದನೆ ಹೇಗೆ ಸಾಧ್ಯ ..? ಆ ಸುದ್ದಿ ಮಾಧ್ಯಮದವರು ಪ್ರಭಾವತಿ ಎನ್ನುವ ಮಹಿಳೆ ಮಾಡಿದ ಆರೋಪಗಳನ್ನಷ್ಟೇ ಗಣನೆಗೆ ತೆಗೆದುಕೊಂಡು, ಸ್ಪಷ್ಟೀಕರಣಕ್ಕಾಗಿ ನನ್ನನ್ನು ಸಂಪರ್ಕಿಸದೆಯೇ, ಆ ಘಟನೆಯ ಬಗ್ಗೆ ನನ್ನ ಕಡೆಯ ವಿವರಣೆ ಏನಿದೆ ಎಂಬುದನ್ನು ಕೇಳದೆಯೇ ಅವರು ವರದಿ ಮಾಡಿದ್ದರು.
ವರದಿಯನ್ನು ಬಿತ್ತರಿಸುವ ಮೊದಲು ಕನಿಷ್ಠ ಪಕ್ಷ ನನ್ನನ್ನು ಸಂಪರ್ಕಿಸಿ ನನ್ನ ಕಡೆಯಿಂದಲೂ ವಿವರಣೆ ಪಡೆಯಬಹುದಿತ್ತು. ಕಟ್ಟಡ ನೆಲಸಮವಾದ ಘಟನೆಯ ಹಿನ್ನೆಲೆಯ ಬಗ್ಗೆ ನನ್ನ ಬಳಿಯೂ ಸ್ಪಷ್ಟನೆ ಕೇಳಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಏಕ ಪಕ್ಷೀಯವಾಗಿ ವರದಿಯನ್ನು ಬಿತ್ತರಿಸಿದ್ದಾರೆ.
ಆ ಯೋಧನ ಹೆಸರೇನು..? ಅವರ ಜಾಗ ಮತ್ತು ಅವರ ಕಟ್ಟಡ ಆಗಿರುವುದರಿಂದ ಅವರ ಬಳಿಯೂ ಸುದ್ದಿ ಮಾಧ್ಯಮದವರು ಮಾತನಾಡಬೇಕಿತ್ತಲ್ಲ..? ಅವರ ಹೆಸರು, ಫೋಟೋ ಯಾವುದನ್ನೂ ತೋರಿಸದೆಯೇ, ಧ್ವಂಸ ಮಾಡಲಾದ ಕಟ್ಟಡ ಆ ಯೋಧನಿಗೆ ಸೇರಿದ್ದು ಎಂಬ ಯಾವುದೇ ದಾಖಲೆಯನ್ನು ನೀಡದೆಯೇ “ಯೋಧನಿಗೆ ಸೇರಿದ ಕಟ್ಟಡವನ್ನು ಧ್ವಂಸಗೊಳಿಸಿದ ಅಶೋಕ್ ರೈ” ಅಂತ ವರದಿ ಬಿತ್ತರಿಸುತ್ತಾರಲ್ಲ…? ಮಾಧ್ಯಮದವರು ಇಂಥಾ ಏಕಪಕ್ಷೀಯ ವರದಿ ಮಾಡುವಾಗ ಜಾಗರೂಕರಾಗಿರಬೇಕು. ಕನಿಷ್ಠ ಪಕ್ಷ ಸುಳ್ಳು ಸುದ್ದಿಯನ್ನು ಬಿತ್ತರಿಸಬಾರದು. ಇಲ್ಲಿ ಆಗಿರುವುದು ಭೂವಿವಾದ, ನಾನು ರಿಯಲ್ ಎಸ್ಟೇಟ್ ಉದ್ಯಮಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವಾಗ ಇಂಥಾ ಅನೇಕ ಜಾಗದ ತಕರಾರು ಕೇಸುಗಳಿರುತ್ತವೆ. ಅವುಗಳನ್ನು ನಾವು ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪರಿಹರಿಸಿಕೊಳ್ಳುತ್ತೇವೆ.
ಧ್ವಂಸ ಮಾಡಲಾದ ಈ ಕಟ್ಟಡ ಯಾವ ಸರ್ವೇ ನಂಬರಿನಲ್ಲಿತ್ತು. ಆ ಕಟ್ಟಡಕ್ಕೆ ಬಾಳ ಗ್ರಾಮ ಪಂಚಾಯತಿನಿಂದ ಅನುಮತಿಯನ್ನು ಪಡೆಯಲಾಗಿದೆಯೇ..? ಪರವಾನಿಗೆ ಇದ್ದರೆ ಯಾರ ಹೆಸರಿನಲ್ಲಿದೆ.? ಈಗ ಆ ಕಟ್ಟಡದ ಮೂಲ ವಾರೀಸುದಾರರು ಯಾರು..? ದಾಖಲೆ ಇದ್ದರೆ ಮಾಧ್ಯಮದ ಎದುರು ತೋರಿಸಬೇಕಿತ್ತಲ್ಲವೇ.? ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ಮೇಲೆಯೇ ಯಾರದು ತಪ್ಪು, ಯಾರದು ಸರಿ ಎಂಬುದು ತೀರ್ಮಾನವಾಗುತ್ತದೆ.
ಇದು ಸಂಪೂರ್ಣವಾಗಿ ಪೂರ್ವಾಗ್ರಹ ಪೀಡಿತವಾಗಿ ಮಾಡಿರುವ ಸುದ್ದಿ ಅಂತ ಮೇಲ್ನೋಟಕ್ಕೇ ಅನಿಸುತ್ತದೆ. ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯುವುದರಿಂದ ಮತ್ತು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯೂ ಆಗಿರುವುದರಿಂದ ಈ ರೀತಿ ವರದಿಯನ್ನು ಬಿತ್ತರಿಸಿದ್ದಾರೆ. ರಾಜಕೀಯ ಪ್ರೇರಿತವಾದ ಸುದ್ದಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.