ಸುರತ್ಕಲ್: ಸಾಲಬಾಧೆಯಿಂದ ನೊಂದ ಯುವಕ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರ ಹೊರ ವಲಯದ ಎನ್ ಐಟಿಕೆ ಬಳಿ ನಡೆದಿದೆ. ಕಾಟಿಪಳ್ಳ ನಿವಾಸಿ ಲಾರೆನ್ಸ್ ಡಿಸೋಜ(20) ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾರೆನ್ಸ್ ಡಿಸೋಜ ಬರೆದಿದ್ದ ಡೆತ್ ನೋಟ್ ಲಭ್ಯವಾಗಿದ್ದು, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈತ ತನ್ನ ಸ್ನೇಹಿತನಿಂದ ಸಾಲ ಪಡೆದಿದ್ದ. ಆದರೆ, ಅದನ್ನು ಮರಳಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿರುವುದಾಗಿ ಉಲ್ಲೇಖಿಸಿದ್ದಾನೆ. ಇಂದು ಕೆಲಸಕ್ಕೆ ರಜೆ ಹಾಕಿರುವ ಲಾರೆನ್ಸ್ ಸಮುದ್ರ ತಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಡೆತ್ ನೋಟ್ ನಲ್ಲಿ ಕೆಲವರ ಹೆಸರು ಬರೆದಿದ್ದು ಅವರಿಗೆ ಆಗಬೇಕಾದ ಸಣ್ಣ ಪುಟ್ಟ ಹಣದ ಅವಶ್ಯಕತೆಗಳನ್ನು ಬರೆದಿದ್ದಾನೆ. ಅಲ್ಲದೆ, ಹಣವನ್ನು ಹಿಂತಿರುಗಿಸುವುದಕ್ಕಾಗಿ ತಾಯಿಯ ಬಂಗಾರವನ್ನು ಕೊಂಡೊಯ್ದಿದ್ದು 12 ಸಾವಿರ ರೂ.ಗೆ ಅಡವಿಟ್ಟಿದ್ದ. ಆದರೆ ಹಣವನ್ನು ಆಗಬೇಕಾದವರಿಗೆ ಹಿಂತಿರುಗಿಸಲಾಗದೆ ಕೈಯಲ್ಲಿ ಖರ್ಚಾಗಿ ಖಾಲಿಯಾಗಿತ್ತು ಎಂದು ಬರೆದಿದ್ದಾನೆ.
ಜೊತೆಗೆ ಕುಡಿತದ ಚಟ ಹೊಂದಿದ್ದರಿಂದ ಅದಕ್ಕೇ ಹಣ ಖಾಲಿಯಾಗಿತ್ತು ಎನ್ನಲಾಗಿದೆ. ಅಲ್ಲದೆ, ತನ್ನ ಮೊಬೈಲ್ ವಿವರಗಳನ್ನೂ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಗೂಗಲ್ ಪೇ, ಎಟಿಎಂ ಇತ್ಯಾದಿ ಪಾಸ್ ವರ್ಡ್ ಗಳನ್ನು ಬರೆದಿದ್ದಲ್ಲದೆ, ಮೇಲಿನ ಕಾರಣವಲ್ಲದೆ ಸಾವಿಗೆ ಪ್ರಮುಖ ಕಾರಣವೊಂದು ಮೊಬೈಲಿನಲ್ಲಿದೆ. ಸಾರಿ ಅಮ್ಮಾ ಎನ್ನುತ್ತಾ ಪತ್ರವನ್ನು ಬರೆದು ಮುಗಿಸಿದ್ದಾನೆ. ತುಳು ಭಾಷೆಯಲ್ಲಿ ಇಂಗ್ಲಿಷ್ ವರ್ಣಮಾಲೆಯಲ್ಲಿ ಪತ್ರವನ್ನು ಬರೆಯಲಾಗಿದೆ.
ಸಾಮಾನ್ಯ ಕುಟುಂಬದ ಲಾರೆನ್ಸ್ ಸಣ್ಣ ವಯಸ್ಸಿನಲ್ಲಿಯೇ ಖಾಸಗಿಯಾಗಿ ಕೆಲಸಕ್ಕೆ ಸೇರಿದ್ದು ಕುಡಿಯುವುದನ್ನೂ ರೂಢಿಸಿಕೊಂಡಿದ್ದ. ಇದೀಗ ಸಣ್ಣ ಮಟ್ಟಿನ ಸಾಲದ ಮೊತ್ತವನ್ನೇ ದೊಡ್ಡ ಸಮಸ್ಯೆಯನ್ನಾಗಿಸಿ ಜೀವನ ಮುಗಿಸಿದ್ದಾನೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.