ಸುಳ್ಯ: ಕಳಂಜದಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಮಸೂದ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಸೂದ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಕಾಸರಗೋಡಿನ ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್, ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜದಲ್ಲಿರುವ ಅಜ್ಜನ ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ಜು.19ರಂದು ಸಂಜೆ ಕಳಂಜ ಗ್ರಾಮದ ಎಮ್ಮು ನಗರ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಮಸೂದ್ ಮತ್ತು ಸುಧೀರ್ ನಡುವೆ ಹೊಡೆದಾಟ ನಡೆದಿತ್ತೆನ್ನಲಾಗಿದೆ. ಬಳಿಕ ಮಾತುಕತೆಯಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸೋಣ ಎಂದು ಸ್ಥಳದಲ್ಲಿದ್ದ ಆರೋಪಿಗಳಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬವರು ಹೇಳಿದ್ದು, ಶಾನಿಫ್ ರಲ್ಲಿ ಮಸೂದ್ ನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ.
ಅದರಂತೆ ಶಾನಿಫ್ ರಾತ್ರಿ 11 ಗಂಟೆ ಸುಮಾರಿಗೆ ಎಷ್ಟು ನಗರಕ್ಕೆ ಕರೆದುಕೊಂಡು ಬಂದಾಗ ಎಂಟು ಮಂದಿ ಆರೋಪಿಗಳ ತಂಡ ಮಸೂದ್ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಆರೋಪಿ ಅಭಿಲಾಷ್ ಆಲ್ಲಿ ಬಿದ್ದುಕೊಂಡಿದ್ದ ಬಾಟಲಿಯೊಂದರಿಂದ ಮಸೂದ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆನ್ನಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಓಡಿದ ಮಸೂದ್ ಬಳಿಕ ಸ್ಥಳೀಯರೊಬ್ಬರ ಮನೆಯ ಬಾವಿ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎಂದು ಶಾನಿಗ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಬೆಳ್ಳಾರೆ: ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಎಂಟು ಯುವಕರ ಬಂಧನ.!