ಸುಳ್ಯ: ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಸುಳ್ಯದ ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ಈ ಕೃತ್ಯ ನಡೆದಿದೆ.
ಗಂಭೀರ ಗಾಯಗೊಂಡ ಯುವಕನ್ನು ಮಸೂದ್ (19) ಎನ್ನಲಾಗಿದೆ. ಈತನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆಂಜದ ನಿವಾಸಿಗಳಾದ ಮಸೂದ್ ಮತ್ತು ಸುಧೀರ್ ನಡುವೆ ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಅಂಗಡಿಯ ಬಳಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು ಸುಧೀರ್ಗೂ ಗಾಯಗಳಾಗಿದೆ.
ತಕ್ಷಣ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳಿಸಿದ್ದಾರೆ. ಇದಾದ ಬಳಿಕ ಸುಧೀರ್ ಮತ್ತು ಆತನ ಸ್ನೇಹಿತರು, ಮಸೂದ್ ಗೆ ಕರೆಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದು ಕರೆಸಿ ಮಸೂದ್ ಮೇಲೆ ದಾಳಿ ನಡೆಸಿ ಹಲ್ಲೆಗೈದಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಮಸೂದ್ ಅಲ್ಲಿಂದ ಓಡಿಹೋಗಿದ್ದು, ವಿಷಯ ತಿಳಿದ ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ.
ತಲೆಗೆ ತೀವ್ರ ಹಲ್ಲೆಗೊಳಗಾಗಿ ಅಲ್ಲಿಂದ ತಪ್ಪಿಸಿಕೊಂಡ ಮಸೂದ್ ಸ್ವಲ್ಪ ದೂರ ಹೋಗಿ ಬಿದ್ದಿದ್ದಾರೆ. ಎಲ್ಲಾ ಕಡೆ ಹುಡುಕಾಡಿದಾಗ ಮನೆಯೊಂದರ ಬಾವಿಯ ಬಳಿ ಪ್ರಜ್ಞಾಹೀನನಾಗಿ ಬಿದ್ದಿರುವುದು ಕಂಡುಬಂದು ಆತನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಬೇಕಷ್ಟೆ.