ತಾಯಿ ಮಗುವಿಗೆ ಜನ್ಮ ಕೊಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವಗೊಂಡರೂ ಪ್ರಾಣಾಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿಕ ಕಲ್ಮಕಾರು ಎಂಬಲ್ಲಿ ಅಸ್ಸಾಂ ಮೂಲದವರು ಕೂಲಿ ಕೆಲಸಕ್ಕೆಂದು ಬಂದವರು ವಾಸವಿದ್ದರು. ಸಣ್ಣ ಟೆಂಟ್ ಹಾಕಿಕೊಂಡು ಅಲ್ಲಿಯೇ ಅವರ ಜೀವನ ಸಾಗಿಸುತ್ತಿದ್ದು ಅಲ್ಲಿ ವಾಸವಿದ್ದ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ಗೆ ಕರೆ ಮಾಡಲಾಗುತ್ತದೆ. ಆದರೆ ಆ ವೇಳೆಗಾಗಲೇ ಟೆಂಟ್ನೊಳಗೆಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
ಹೆರಿಗೆ ವೇಳೆ ಹೊಕ್ಕಳ ಬಳ್ಳಿ ಕಡಿದುಕೊಳ್ಳದೆ ಮಗು ಪ್ರಪಂಚಕ್ಕೆ ಕಾಲಿರಿಸಿತ್ತು. ವಿಪರೀತ ರಕ್ತ ಸ್ರಾವದಿಂದ ಮಹಿಳೆ ನರಳುತ್ತಿದ್ದಳು. ಆ ತಡರಾತ್ರಿ ವೈದ್ಯರನ್ನು ಕರೆದುಕೊಂಡು ಬರುವುದು ಕಷ್ಟದ ವಿಚಾರ ಆಗಿತ್ತು. ಈ ವೇಳೆ ಸಮಾಜ ಸೇವಕ ಚಂದ್ರ ಕಡೋಡಿಯವರ ಮೂಲಕ ಅಮರ ಸುಳ್ಯ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ನಲ್ಲಿ ನಾಜೂಕಾಗಿ ಡ್ರೈವ್ ಮಾಡಿಕೊಂಡು ಸುಳ್ಯದ ಸರಕಾರಿ ಆಸ್ಪತ್ರೆಗೆ ತಾಯಿ- ಮಗುವನ್ನು ಕರೆದುಕೊಂಡು ಹೋಗಲಾಗಿದೆ.
ಪ್ರಯಾಣದ ದಾರಿಯುದ್ಧಕ್ಕೂ ತಾಯಿಯ ಕಾಲಿನ ಮೇಲೆ ಮಗುವನ್ನು ಮಲಗಿಸಿಕೊಂಡು ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಕಡೆ ಮಗುವಿನ ಅಳು, ಮತ್ತೊಂದು ಕಡೆ ತಾಯಿಗೆ ಆಗುತ್ತಿರುವ ರಕ್ತಸ್ರಾವದಿಂದ ಸ್ವತಃ ಕಡೋಡಿಯವರು ಕೂಡ ಗಾಬರಿಯಾಗಿದ್ದರು. ಆದರೆ ಕಡೋಡಿಯವರು ಯಶಸ್ವಿಯಾಗಿ ತಾಯಿ-ಮಗುವನ್ನು ತಡರಾತ್ರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತಾಯಿ ಹಾಗೂ ಗಂಡು ಮಗು ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಷ್ಟದ ಸಮಯದಲ್ಲಿ ಬೆಳಕಾದ ಚಂದ್ರ ಕಡೋಡಿಯವರ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.