ಉಪ್ಪಿನಂಗಡಿ: ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲುವಿನ ಪಾದಾಳದ ಸಂದೀಪ್ ಬಂಧಿತ ಆರೋಪಿ
ಜ.6ರಂದು ರಾತ್ರಿ ಬರಿಮಾರು ಗ್ರಾಮದ ಲಿಖಿತ್ ಕುಮಾರ್ ಎಂಬವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಇವರಿಗೆ ಮುಳ್ಳುಗುಡ್ಡೆಯ ಯುವತಿಯೊಂದಿಗೆ ಜ.3ರಂದು ಮದುವೆಯಾಗಿದ್ದು, ಜ.6ರಂದು ಪತ್ನಿಯ ಮನೆಗೆ ಬಂದಿದ್ದರು. ರಾತ್ರಿ ಊಟ ಮಾಡಿ ಮನೆಯವರೆಲ್ಲಾ 10:30ರ ಸುಮಾರಿಗೆ ಮಲಗಿದ್ದರು. ಇವರ ಭಾವ ಕೀರ್ತನ್ ಎಂಬವರು ಬಹಿರ್ದೆಸೆಗೆಂದು ರಾತ್ರಿ ಎದ್ದು ಹೊರ ಬಂದಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಬೈಕ್ ಬೆಂಕಿಯಿಂದ ಉರಿಯುತ್ತಿರುವುದು ಕಂಡು ಬಂತು. ಇದನ್ನು ನೋಡಿದ ಕೀರ್ತನ್ ಮನೆಯವರನ್ನು ಎಬ್ಬಿಸಿದ್ದು, ಹೊರಗೆ ಬಂದು ನೋಡಿದಾಗ ಅಲ್ಲಿ ಮನೆಯ ಮುಂದೆ ವಾಹನ ನಿಲ್ಲಿಸುವ ಶೆಡ್ನಲ್ಲಿ ಲಿಖಿತ್ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಮನೆಯಿಂದ ತೆಗೆದುಕೊಂಡು ಹೋಗಿ ರಸ್ತೆಯಲ್ಲಿ ಉರಿಸಲಾಗಿತ್ತು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಲಿಖಿತ್ ಅವರು ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತ ಮದುವೆಯಾದ ಯುವತಿಯನ್ನು ಏಕಮುಖವಾಗಿ ಪ್ರೀತಿ ಮಾಡುತ್ತಿದ್ದು, ಆಕೆಗೆ ಮದುವೆಯಾಗಿದ್ದರಿಂದ ಆಕೆಯ ಪತಿಯ ಮೇಲಿನ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.