ಬೆಂಗಳೂರು: ಕರ್ನಾಟದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ಡೌನ್ ಮೊರೆ ಹೋಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಮೇ 10ರಿಂದ ಮೇ 24ರ ತನಕ ಲಾಕ್ಡೌನ್ ಮಾಡಲಾಗುವುದು ಎಂದು ತಿಳಿಸಿದೆ.
ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಗಟ್ಟಬೇಕೆಂದರೆ ಲಾಕ್ಡೌನ್ ಮಾಡಲೇಬೇಕೆಂದು ತಜ್ಞರು ಕೂಡಾ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದು, ಇಂದು (ಮೇ 7) ಬೆಳಗ್ಗೆ ನಿಯಮಪಾಲನೆ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿಗಳು ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು.
ಇದೀಗ 14 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಲಾಕ್ಡೌನ್ ವೇಳೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, 10 ಗಂಟೆಯ ಬಳಿಕ ಯಾರೂ ಹೊರಗೆ ಓಡಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನಗಳ ಓಡಾಟ ಇರಲಿದ್ದು, ಆನ್ಲೈನ್ ಡೆಲಿವರಿ ಸರ್ವಿಸ್ಗೂ ಅವಕಾಶ ನೀಡಲಾಗಿದೆ. 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ಡೌನ್ ಮಾಡಿರುವುದರಿಂದ ಪ್ಯಾಕೇಜ್, ನೆರವು ನೀಡುವ ಬಗ್ಗೆ ಹಂತ ಹಂತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂಬುದನ್ನೂ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಏರುಗತಿಯಲ್ಲೇ ಸಾಗುತ್ತಿರುವುದರಿಂದ ಇಷ್ಟು ದಿನ ಲಾಕ್ಡೌನ್ ಬಗ್ಗೆ ಒಲವು ಹೊಂದಿರದಿದ್ದ ರಾಜ್ಯ ಸರ್ಕಾರ ಈಗ ಅನಿವಾರ್ಯವಾಗಿ ಆ ನಿರ್ಧಾರಕ್ಕೆ ಕೈ ಹಾಕಬೇಕಾಗಿದೆ.
ಮುಖ್ಯಮಂತ್ರಿ ಘೋಷಣೆಯ ಮುಖ್ಯ ಅಂಶಗಳು:
- ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10ರವರೆಗೆ ಅವಕಾಶ
- ಹಣ್ಣು, ಮಾಂಸ, ತರಕಾರಿ ಅಂಗಡಿ ಓಪನ್ ಇರಲಿವೆ
- ತಳ್ಳುವಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ
- ಸರ್ಕಾರಿ ಕಚೇರಿ ಭಾಗಶಃ ಕಾರ್ಯನಿರ್ವಹಣೆ
- ರಸ್ತೆ ಕಾಮಗಾರಿ, ನಿಗದಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ
- ಕಾರ್ಮಿಕರನ್ನು ಬಳಸಿ ನಿರ್ಮಾಣ ಕಾರ್ಯಕ್ಕೆ ಅವಕಾಶ
- ವಿವಾಹ ಸಮಾರಂಭದಲ್ಲಿ ಕೇವಲ 50 ಜನರಿಗೆ ಅವಕಾಶ
- ಅತ್ಯವಶ್ಯಕ ವಸ್ತುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ
- ಕಾರ್ಮಿಕರು ಬೆಂಗಳೂರು ತೊರೆಯಬಾರದು, ಭಯಪಡುವ ಅಗತ್ಯವಿಲ್ಲ
- ಕೈಗಾರಿಕಾ ಚಟುವಟಿಕೆಗೆ ನಿಷೇಧ ಹೇರಲಾಗಿದೆ
ಒಬ್ಬ ವ್ಯಕ್ತಿಯನ್ನ ಕೂಡ ರಸ್ತೆಯಲ್ಲಿ ಓಡಾಡಲು ಬಿಡಲ್ಲ, ಜನರು ಹೇಗೆ ಸಹಕಾರ ಕೊಡ್ತಾರೆ ಎಂದು ಕೆಲವು ದಿನ ನೋಡ್ತೇವೆ ಇನ್ನೂ ಬಿಗಿ ಮಾಡಬೇಕು ಅನ್ನಿಸಿದರೆ ಮಾಡಲು ಸಿದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡೋದು ಜನರ ಕರ್ತವ್ಯ ಎಂದು ತಿಳಿಸಿದರು.