ಸ್ನೇಹಿತನ ಬರ್ತಡೇ ಪಾರ್ಟಿಗೆ ಬಂದವ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೀಡಾದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯ ನಿವಾಸಿ ದುರ್ಗೇಶ ಎನ್ನಲಾಗಿದೆ. ಈತನಿಗೆ ಈಗ 24 ವರ್ಷ ವಯಸ್ಸು. ಮದುವೆಯಾಗಿ ಎರಡು ವರ್ಷವಾಗಿದೆ.
ರಾತ್ರಿ ಸ್ನೇಹಿತ ಹೇಮಂತ್ ನ ಬರ್ಡೇ ಪಾರ್ಟಿ ಇದೆ ಎಂದು, ಸ್ನೇಹಿತರ ಗ್ಯಾಂಗ್ ನೊಂದಿಗೆ ನಗರದ ಕನ್ನಂಪಲ್ಲಿ ಬಳಿ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ನನಗಿಷ್ಟು ನಿನಗಿಷ್ಟು ಅಂತ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಪರಿಚಯಸ್ಥ ಶ್ರವಣ್ ಜೊತೆ ಕಿರಿಕ್ ಆಗಿದೆ ಎನ್ನಲಾಗಿದೆ. ಮನೆಗೆ ಬಂದು ವಾಪಸ್ ಪಾರ್ಟಿ ಸ್ಥಳಕ್ಕೆ ಹೋದ ದುರ್ಗೇಶ ರಾತ್ರಿ 11 ಗಂಟೆ ಸಮಯದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾನೆ.
ದುರ್ಗೇಶ ನಗರದಲ್ಲಿ ಸ್ನೇಹಿತರ ದೊಡ್ಡ ದಂಡನ್ನು ಕಟ್ಟಿಕೊಂಡು ಓಡಾಡ್ತಿದ್ದ. ಯಾವಾಗಲೂ ಸ್ನೇಹಿತರ ಜೊತೆ ಆ ಪಾರ್ಟಿ ಈ ಪಾರ್ಟಿ ಅಂತಿದ್ದನಂತೆ. ಇದ್ರಿಂದ ತಂದೆ ತಾಯಿ ಪತ್ನಿ ಬುದ್ದಿವಾದ ಹೇಳಿ ಯಾವ ಸ್ನೇಹಿತರೂ ಬೇಡ ನಮ್ಮ ಪಾಡಿಗೆ ನಾವು ಇರೋಣ ಅಂತ ಬುದ್ದಿವಾದ ಹೇಳಿದ್ದರಂತೆ. ರಾತ್ರಿ ಸ್ನೇಹಿತರ ಮಧ್ಯೆ ಅದೇನು ನಡೆದಿದೆ ಎಂಬುವುದು ಇನ್ನು ಸ್ಪಷ್ಟವಾಗಿಲ್ಲ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ, ಎಎಸ್ಪಿ ಕುಶಾಲ್ ಚೌಕ್ಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯಕ್ಕೆ ಅನುಮಾನ ಇರುವ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.