ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಕೇಂದ್ರ ಸಚಿವರು ನಿನ್ನೆ ‘ಸ್ವರಾಜ್: ಭಾರತ್ ಕೆ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥ’ ಸರಣಿಯ ವಿಶೇಷ ಸ್ಕ್ರೀನಿಂಗ್ನಲ್ಲಿ ಪಾಲ್ಗೊಂಡಿದ್ದರು. ದೂರದರ್ಶನದಲ್ಲಿ ಈ ಧಾರಾವಾಹಿ ಆಗಸ್ಟ್ 14ರಿಂದ ಪ್ರಸಾರ ಆರಂಭಿಸಿದೆ. ಸಂಸತ್ತಿನ ಬಾಲಯೋಗಿ ಆಡಿಟೋರಿಯಂನಲ್ಲಿ ಮೋದಿ ಹಾಗೂ ಇತರ ಸಚಿವರಿಗೋಸ್ಕರ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಮೋದಿ ಅವರು ಈ ಶೋನಲ್ಲಿ ಭಾಗಿಯಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಜೊತೆಗೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು. ಮೋದಿ ಅವರು ಈ ಸರಣಿಯನ್ನು ನೋಡಿ ಖುಷಿಪಟ್ಟಿದ್ದಾರೆ.
ಮೂಲಗಳ ಪ್ರಕಾರ ಇಂದು (ಆಗಸ್ಟ್ 17) ಸಂಜೆ ಎರಡು ಎಪಿಸೋಡ್ಗಳು ಪ್ರದರ್ಶನ ಕಂಡಿದೆ. ರಾಣಿ ಅಬ್ಬಕ್ಕ ಹಾಗೂ ಶಿವಪ್ಪ ನಾಯಕ ಅವರ ಕಥೆ ಈ ಎಪಿಸೋಡ್ನಲ್ಲಿ ಇತ್ತು. ಈ ಇಬ್ಬರೂ ಸ್ವಾತಂತ್ರ್ಯ ಹೋರಾಡಿದ್ದಾರೆ. ಇಬ್ಬರೂ ಕರ್ನಾಟಕದ ಹಿನ್ನೆಲೆ ಹೊಂದಿದ್ದಾರೆ ಎಂಬುದು ವಿಶೇಷ.
ಆಗಸ್ಟ್ 14ರಂದು ‘ಸ್ವರಾಜ್’ ಸರಣಿಯ ಪ್ರದರ್ಶನ ಆರಂಭ ಆಗಿದೆ. 75 ಎಪಿಸೋಡ್ಗಳಲ್ಲಿ ಈ ಸರಣಿ ಪ್ರಸಾರ ಕಾಣಲಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಜಗತ್ತಿಗೆ ತಿಳಿಯದ ಅನೇಕ ಮಾಹಿತಿಗಳು ಈ ಸರಣಿಯಲ್ಲಿ ಇರಲಿವೆ. ಪ್ರತಿ ಭಾನುವಾರ ರಾತ್ರಿ 9ರಿಂದ 10 ಗಂಟೆಯವರೆಗೆ ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರ ಕಾಣಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಒರಿಯಾ, ಬೆಂಗಾಲಿ, ಅಸ್ಸಾಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಸರಣಿ ಪ್ರಸಾರ ಆಗಲಿದೆ. ಈ ಮೂಲಕ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.