

ವಿಟ್ಲ: ಕಾಸರಗೋಡು–ಪುತ್ತೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೇರಳ ಮಲಬಾರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲದ ಸಂತೆಕಟ್ಟೆ ರಸ್ತೆ ಸಮೀಪ ನಡೆದಿದೆ.

ಗಾಯಾಳುವನ್ನು ಕೇರಳದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳುಬೈಲು ನಿವಾಸಿ ಸತ್ಯನಾರಾಯಣ ಭಟ್ (76) ಎಂದು ಗುರುತಿಸಲಾಗಿದೆ.ಮಾಹಿತಿಯ ಪ್ರಕಾರ, ಸತ್ಯನಾರಾಯಣ ಭಟ್ ಅವರು ತಮ್ಮ ಪತ್ನಿಯೊಂದಿಗೆ ಕೊಲ್ನಾಡು ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಲು ವಿಟ್ಲಕ್ಕೆ ಬಂದಿದ್ದರು. ಈ ವೇಳೆ ಸಂತೆಕಟ್ಟೆ ರಸ್ತೆ ಸಮೀಪದ ಹಣ್ಣಿನ ಅಂಗಡಿಯ ಮುಂದೆ ಹಣ್ಣು ಖರೀದಿಸುತ್ತಿದ್ದಾಗ, ಕಾಸರಗೋಡಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೇರಳ ಮಲಬಾರ್ ಬಸ್ (KL 15 9995) ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಅವರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಕಬ್ಬಿಣದ ಭಾಗ ತಗುಲಿ ಕಾಲಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತಕ್ಕೆ ಕಾರಣವಾದ ಬಸ್ ಅನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.








