ಹರಿದು ಹೋಗಿದ್ದ 200 ರೂಪಾಯಿ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಇಬ್ಬರು, ಪಿಜ್ಜಾ ಡೆಲಿವರಿ ಬಾಯ್ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ, ಉತ್ತರಪ್ರದೇಶದ ಶಹಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು ತಿಂದಿರುವ 21 ವರ್ಷದ ಸಚಿನ್ ಕಶ್ಯಪ್ ಸ್ಥಿತಿ ಗಂಭೀರವಾಗಿದೆ.
ಸಹೋದರರಾದ ನದೀಮ್ ಖಾನ್ ಹಾಗೂ ನಯೀಮ್ ಎಂಬುವವರು ರಾತ್ರಿ 11 ಗಂಟೆ ವೇಳೆಗೆ ಪಿಜ್ಜಾ ಆರ್ಡರ್ ಮಾಡಿದ್ದರು. ಸಚಿನ್ ಮತ್ತವನ ಸಹೋದ್ಯೋಗಿ ರಿತಿಕ್ ಕುಮಾರ್ 11.30ರ ವೇಳೆಗೆ ಪಿಜ್ಜಾ ಡೆಲಿವರಿ ಮಾಡಿ, ಹಣ ಪಡೆದುಕೊಂಡು ಹೋಗಿದ್ದಾರೆ.
ಸಚಿನ್ ಮತ್ತವನ ಸಹೋದ್ಯೋಗಿ ರಿತಿಕ್ ಕುಮಾರ್ ಸಾಫ್ಟ್ ಡ್ರಿಂಕ್ ಕೊಳ್ಳಲು ಬಂದಿದ್ದಾರೆ. ಈ ವೇಳೆ 200 ರೂಪಾಯಿ ಹರಿದ ನೋಟನ್ನು ಕೊಟ್ಟಿದ್ದಾರೆ. ಅದನ್ನು ಸ್ವೀಕರಿಸಲು ಸಾಧ್ಯವಿಲ್ಲವೆಂದು ಅಂಗಡಿಯಾತ ಹೇಳಿದ್ದಾನೆ. ಈ ವೇಳೆ ನದೀಮ್ ಖಾನ್ ಕೊಟ್ಟ ನೋಟನ್ನು ಹಿಂತಿರುಗಿ ಕೊಡಲು ಮನೆಗೆ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ನದೀಮ್ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಸಚಿನ್ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡಿನ ಸದ್ದು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಈಗಾಗ್ಲೇ ಆರೋಪಿಗಳನ್ನು ಬಂಧಿಸಿದ್ದು, ಪಿಸ್ತೂಲ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ವಿನಾಕಾರಣ ಗುಂಡೇಟು ತಿಂದ ಸಚಿನ್ ಜೀವನ್ಮರಣ ಹೋರಾಟ ಮುಂದುವರಿಸಿದ್ದಾನೆ.