ಹಾಡಹಗಲೇ ಕಾರಿನಲ್ಲಿದ್ದ 13.75 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿರುವ ಘಟನೆ ಬೆಂಗಳೂರಿನ ಸರ್ಜಾಪುರ ಬಳಿಯ ಸೋಮ್ಪುರದ ಸಬ್ ರಿಜಿಸ್ಟರ್ ಕಚೇರಿ ಬಳಿ ನಡೆದಿದೆ. ಇಬ್ಬರು ದರೋಡೆಕೋರರು ಕೇವಲ 58 ಸೆಕೆಂಡ್ಗಳಲ್ಲಿ ಬಿಎಂಡಬ್ಲ್ಯೂ ಕಾರನ್ನು ಹಿಂಬಾಲಿಸಿಕೊಂಡು ಬಂದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಬ್ಬ ಕಾರಿನ ಬಳಿ ಬಂದು ಸುತ್ತ ಯಾರಿದ್ದಾರೆ ಎನ್ನುವುದನ್ನು ಗಮನಿಸಿದ್ದಾನೆ. ಇನ್ನೊಬ್ಬ ದ್ವಿಚಕ್ರ ವಾಹನದಲ್ಲಿ ಅವನನ್ನು ಕರೆದುಕೊಂಡು ಹೋಗಲು ಸಿದ್ದವಾಗಿದ್ದ. ಎಲ್ಲವನ್ನು ಗಮನಿಸಿದ ಬಳಿಕ ಕಾರಿನ ಬಳಿ ಬಂದಿದ್ದ ಕಳ್ಳ ಒಂದೇ ಏಟಿಗೆ ಕಾರಿನ ಕಿಟಕಿ ಗಾಜನ್ನು ಪುಡಿ ಮಾಡಿ ಕಾರಿನ ಒಳಗೆ ಜಂಪ್ ಮಾಡಿ ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ.
ಆನೇಕಲ್ನ ಕಸಬಾ ನಿವಾಸಿಯಾದ ಮೋಹನ್ ಬಾಬು ಅವರು ಜಮೀನು ನೋಂದಣಿಗಾಗಿ ಸ್ನೇಹಿತರ ಬಳಿ 5 ಲಕ್ಷ ರೂ. ಪಡೆದಿದ್ದರು. ಇದನ್ನು ಸೇರಿಸಿ 13.75 ಲಕ್ಷ ರೂ. ನೊಂದಿಗೆ ಮೋಹನ್ ಬಾಬು ಅವರ ಸಂಬಂಧಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಸಬ್ ರಿಜಿಸ್ಟರ್ ಕಚೇರಿ ಬಳಿ ಮಧ್ಯಾಹ್ನ ಬಂದಿದ್ದರು. ಅಲ್ಲಿಂದ ಮೋಹನ್ ಬಾಬು ಅವರೊಂದಿಗೆ ಹೊರಡುವವರಿದ್ದರು. ಆದರೆ ಅಷ್ಟರಲ್ಲಿ ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.