ಹಾಸನ : ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ರೋಷನ್ (4) ಎಂದು ಗುರುತಿಸಲಾಗಿದೆ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆ ತರಲು ಮನೆಗಳಿಗೆ ಹೋದಾಗ ಈ ಘಟನೆ ನಡೆದಿದೆ.
ದೊಡ್ಡಕಲ್ಲೂರು ಗ್ರಾಮದ ಯಶವಂತ್-ಗೌರಿ ಎಂಬುವವರ ಪುತ್ರ ರೋಷನ್ಗೆ ಹಾವು ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೋಷನ್ನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್ನಲ್ಲಿ ಕರೆ ತಂದಿದ್ದಾರೆ. ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರ ಪಟ್ಟಣ್ಣದ ಆಸ್ಪತ್ರೆಗೆ ತೆರಳುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಆದರೆ ಹೆತ್ತೂರಿನಿಂದ ಸಕಲೇಶಪುರ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಂದಿರಲಿಲ್ಲ. ಇದರಿಂದಾಗಿ ರೋಷನ್ನ್ನು ಸಕಲೇಶಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅರ್ಧಕ್ಕೆ ಅಂಬುಲೆನ್ಸ್ ಬಂದಿದೆ. ಆದರೆ ಅಷ್ಟರಾಗಲೇ ಬಾಲಕ ಸಾವನ್ನಪ್ಪಿದ್ದ. ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದ ಕಾರಣ ಬಾಲಕ ಸಾವನ್ನಪ್ಪಿದ್ದಾನೆಂದು ಪೋಷಕರು ಆರೋಪಿಸಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.