ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಿಮಾಚಲ ಪ್ರದೇಶದ ಉನಾದಲ್ಲಿ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಅವರು ಇಂದು ಉತ್ತರ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮುಂತಾದವರು ಉಪಸ್ಥಿತರಿದ್ದರು.

ಅಂಬ್ ಅಂಡೌರಾದಿಂದ ನವದೆಹಲಿಗೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ನ ಸಂಚಾರಕ್ಕೆ ಉನಾದಲ್ಲಿ ಫ್ಲ್ಯಾಗ್ಆಫ್ ಮಾಡಲಾಯಿತು. ಇದು ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಮೋದಿಯವರ 9ನೇ ಭೇಟಿಯಾಗಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಸೆಮಿ ಹೈಸ್ಪೀಡ್ ರೈಲು ದೆಹಲಿ ಮತ್ತು ಅಂಬ್ ಅಂಡೌರಾ ನಡುವೆ ಸಂಚರಿಸಲಿದೆ. ಇದು ಬುಧವಾರವನ್ನು ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ರೈಲು ಸಂಖ್ಯೆ 22447 ನವದೆಹಲಿಯಿಂದ ಅಂಬ್ ಅಂಡೌರಾಗೆ ಬೆಳಿಗ್ಗೆ 5.50ಕ್ಕೆ ಹೊರಟು 11.05ಕ್ಕೆ ಅಂಬ್ ಅಂಡೌರಾ ರೈಲು ನಿಲ್ದಾಣವನ್ನು ತಲುಪಲಿದೆ. ಅಂಬ್ ಅಂಡೌರಾದಿಂದ 22448 ಸಂಖ್ಯೆಯ ರೈಲು ಮಧ್ಯಾಹ್ನ 1 ಗಂಟೆಗೆ ಹೊರಟು ಸಂಜೆ 6.25ಕ್ಕೆ ನವದೆಹಲಿಗೆ ತಲುಪಲಿದೆ.

ಈ ರೈಲು 16 ಕೋಚ್ಗಳನ್ನು ಹೊಂದಿದ್ದು, ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾ ಹಿಮಾಚಲದಲ್ಲಿ ನಿಲುಗಡೆ ಹೊಂದಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಸೆಮಿ-ಹೈ-ಸ್ಪೀಡ್ ರೈಲು, ವಂದೇ ಭಾರತ್ ಸರಣಿಯ ಅಡಿಯಲ್ಲಿ ಮೂರನೇ ಸೇವೆಗೆ ಪ್ರಧಾನಿ ಮೋದಿ ಸೆಪ್ಟೆಂಬರ್ 30ರಂದು ಗಾಂಧಿನಗರ ಕ್ಯಾಪಿಟಲ್ನಿಂದ ಹಸಿರು ನಿಶಾನೆ ತೋರಿದ್ದರು. ಇದು ಅಕ್ಟೋಬರ್ 1ರಿಂದ ಸಂಚಾರ ಪ್ರಾರಂಭಿಸಿತ್ತು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ದೆಹಲಿ-ವಾರಣಾಸಿ ಮತ್ತು ದೆಹಲಿ-ಕತ್ರಾ ಮಾರ್ಗಗಳಲ್ಲಿ ಸಹ ಸಂಚರಿಸುತ್ತವೆ.









