ಚಾಮರಾಜನಗರ : ಚಿನ್ನದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಚಾಕು ಇರಿತದಿಂದ ಐವರು ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿರುವುದು ವರದಿಯಾಗಿದೆ.ಕೊಳ್ಳೇಗಾಲ ಪಟ್ಟಣದ ಆರ್.ಎಂ ಫಂಕ್ಷನ್ ಹಾಲ್ನಲ್ಲಿ ಮುದಾಸಿ ಹಾಗೂ ಗುಲ್ಜಾರ್ ಬಾನು ವಿವಾಹ ನಿಗದಿಯಾಗಿತ್ತು.

ಮಂಗಳವಾರ ರಾತ್ರಿ ಕಲ್ಯಾಣ ಮಂಟಪದಲ್ಲಿಯೇ ಚಿನ್ನದ ವಿಚಾರಕ್ಕೆ ಗಲಾಟೆ ನಡೆದಿದ್ದು, ಬುಧವಾರ ವಧುನಿನ ಮನೆಗೆ ಮಾತುಕತೆಗೆ ತೆರಳಿದ್ದ ವೇಳೆ ವರನ ಕಡೆಯವರು ಹಾಗೂ ವಧುವಿನ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.ಈ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು ಪರಸ್ಪರ ಚಾಕು, ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಹಲ್ಲೆಯಿಂದ ವರನ ಸೋದರ ಸಂಬಂಧಿಗಳಾದ ಸಮೀರ್ ಆಯಾಜ್ (32), ಶೋಯೆಬ್ (30) ಹಾಗೂ ವಧುವಿನ ಸಂಬಂಧಿಗಳಾದ ಫೈರೋಜ್ ಖಾನ್ (36), ಅಬ್ದುಲ್ ವಾಹಿದ್ (44), ಅಬ್ದುಲ್ ಆರೀಫ್(40) ಗಾಯಗೊಂಡಿದ್ದು, ಗಾಯಾಳುಗಳಿಗೆ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2 ಕುಟುಂಬಗಳು ಪರಸ್ಪರ ಒಪ್ಪಿ ಅದ್ಧೂರಿಯಾಗಿ ಮದುವೆ ಮಾಡುವ ಸಿದ್ದತೆ ನಡೆಸಿದ್ದರು. ಆದರೆ ಚಿನ್ನ ಹಾಕಿಲ್ಲ ಎಂದು ವರನ ಕಡೆಯವರು ಕ್ಯಾತೆ ತೆಗೆದಿದ್ದು, ಮದುವೆ ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ.








