ಮಂಗಳೂರು, ಜೂ.28: ನಗರದ ಪುರಭವನದ ಸಮೀಪದ ಫುಟ್ ಪಾತ್ ನಲ್ಲಿ ವ್ಯಾಪಾರನಿರತ ಬೀದಿಬದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ರವಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಸ್ಥಳದಲ್ಲಿ ಉಪಸ್ಥಿತರಿದ್ದು, ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮಾರ್ಗದರ್ಶನ ನೀಡಿದರು.
ಈ ಹಂತದಲ್ಲಿ ಕಾರ್ಯಾಚರಣೆಯನ್ನು ಪ್ರಶ್ನಿಸಿದ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು.
ಕಾರ್ಯಾಚರಣೆಗೆ ಮೊದಲು ಮನಪಾ ಆಯುಕ್ತ ರವಿಚಂದ್ರ ನಾಯಕ್ ಬೀದಿ ವ್ಯಾಪಾರಿಗಳ ಬಳಿ ತೆರಳಿ ಇಲ್ಲಿ ಕಾನೂನು ಪ್ರಕಾರ, ನಿಯಮ ಪ್ರಕಾರ ವ್ಯಾಪಾರ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಹಂತದಲ್ಲಿ ವ್ಯಾಪಾರಿಗಳು ‘‘ನಾವು ನಲುವತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ನಿಯತ್ತಿನಿಂದ ದುಡಿಯುತ್ತಿದ್ದೇವೆ, ಕಳ್ಳತನ ಮಾಡುತ್ತಿಲ್ಲ ಸಾರ್. ನಮಗೆ ನೀವು ಬದಲಿ ವ್ಯವಸ್ಥೆ ಮಾಡಿಕೊಡಿ ’’ಎಂದು ಮನವಿ ಮಾಡಿದರು.
‘ ನಿಮಗೆ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ’ ಎಂದು ಆಯುಕ್ತರು ಹೇಳಿದಾಗ, ಹಾಗೆ ಹೇಳಬೇಡಿ ಸಾರ್.. ನಮಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದಾಗ ‘‘ಆಗುವುದಿಲ್ಲ ಯಾರಾದರೂ ನಿಯಮ ಉಲ್ಲಂಘಿಸಿ ಮುಂದುವರಿದರೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಮನಪಾ ಆಯುಕ್ತ ರವಿಚಂದ್ರ ನಾಯಕ್ ಮುನ್ನಚ್ಚರಿಕೆ ನೀಡಿದರು.
ಆಯುಕ್ತರು ತಮ್ಮ ಮನವಿಗೆ ಸ್ಪಂದಿಸದೆ ಇದ್ದಾಗ ವ್ಯಾಪಾರಿಗಳು ಸಿಟ್ಟಾದರು. ಮನಪಾದ ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಶಕ್ಕೆ ತೆಗದುಕೊಂಡರು.








