ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿರುವೈಲು, ಬೈತುರ್ಲಿ ಹಾಗೂ ಬೈಕಂಪಾಡಿ ಅಂಗರಗುಂಡಿ ಪ್ರದೇಶದಲ್ಲಿ ನೂತನ ಒಳಚರಂಡಿ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ತಿರುವೈಲು ವಾರ್ಡ್ನಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ಅನುದಾನ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಹಕಾರ ನೀಡಿದ್ದು, ಚುನಾವಣೆ ಸಂದರ್ಭ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಜನತೆ ಕಾಮಗಾರಿ ಸಂದರ್ಭ ಅಡೆ ತಡೆ ನೀಡದೆ ಸಹಕಾರ ನೀಡಿದರೆ ಶೀಘ್ರ ಕೆಲಸ ಮುಗಿಸಲು ಸಾಧ್ಯವಾಗುತ್ತದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಅವಶ್ಯಕತೆಯಾದ ಒಳಚರಂಡಿ ಯೋಜನೆ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಬಾಕಿಯುಳಿದಿದೆ. ಒಳಚರಂಡಿ ವ್ಯವಸ್ಥೆಗೆ ಸಾರ್ವಜನಿಕರಿಂದ ಮನವಿಯೂ ಬಂದಿತ್ತು. ಈ ಹಿಂದೆ ಮಂಗಳೂರು ಉತ್ತರದ ಕೆಲವು ಕಡೆ ಕಾಮಗಾರಿ ಪೂರ್ಣವಾಗಿದ್ದರೂ ತಾಂತ್ರಿಕ ಕಾರಣದಿಂದ ಸಂಪರ್ಕ ಸಾಧ್ಯವಾಗಿಲ್ಲ. ಇನ್ನು ಕೆಲವು ಕಡೆ ಸೋರಿಕೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ನೂತನ ಯೋಜನೆಯು ಯಾವುದೇ ಕಾರಣಕ್ಕೂ ವೈಫಲ್ಯಕ್ಕೆ ತುತ್ತಾಗದಂತೆ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರದ ಕ್ರಿಮಿಟ್ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ವಾರ್ಡ್ 20ರ ತಿರುವೈಲು ಪ್ರದೇಶದ ಕಸ್ಟಮ್ಸ್ ಕಾಲನಿ, ಅಮೃತ ನಗರ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ ದೇವರ ಪದವು, ಜ್ಯೋತಿ ನಗರ 1.50 ಕೋಟಿ, ಮಂಗಳ ನಗರದಲ್ಲಿ 1 ಕೋಟಿ, ಬೈತುರ್ಲಿ ಪ್ರದೇಶದಲ್ಲಿ 5 ಕೋಟಿ, ಬೈಕಂಪಾಡಿ ಅಂಗರ ಗುಂಡಿ, ಕುಡುಂಬೂರು ಪ್ರದೇಶದಲ್ಲಿ ಅಂದಾಜು 14.50 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ ಮಾಡಲಾಗಿದೆ. ಒಟ್ಟು 2 ವೆಟ್ ವೆಲ್, ಎಸ್ ಟಿ ಪಿ ಸಹಿತ ಸಂಪರ್ಕ ಕಾಮಗಾರಿ ನಡೆಯಲಿದೆ. ಕೆಯುಐಡಿಎಫ್ಸಿ ಸಂಸ್ಥೆ ಇಲ್ಲಿನ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕಲ್ಕತ್ತ ಮೂಲದ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.
ಕಾರ್ಯಕ್ರಮದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್, ಅಧಿಕಾರಿ ಮಂಜಯ್ಯ, ಜಯಪ್ರಕಾಶ್ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.