
ಪುತ್ತೂರು: ವಿಟ್ಲ-ಪುತ್ತೂರು ರಸ್ತೆಯ ಮಿತ್ತೂರುಸಮೀಪದ ಪರ್ಲೊಟ್ಟು ಎಂಬಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಲ್ಲೇಗ ಮುರ ಶಾಂತಿನಗರ ನಿವಾಸಿ ಹರ್ಷದ್ (22) ಸಾವನ್ನಪ್ಪಿದ್ದಾರೆ.ಅಪಘಾತದ ವಿವರ: ಕಬಕದಿಂದ ಮಾಣಿ ಕಡೆಗೆದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಹರ್ಷದ್ ಅವರ ವಾಹನಕ್ಕೆ ಮಾಣಿಯಿಂದ ಕಬಕ ಕಡೆಗೆ ಬರುತ್ತಿದ್ದ ಬ್ಯಾಟರಿ ಚಾಲಿತ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರ್ಷದ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತ ಯುವಕ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್ಗೆ ಒಳಪಟ್ಟ ಮುರ ನಿವಾಸಿ, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರ. ಇವರು ಪುತ್ತೂರಿನ ನೆಹರು ನಗರದಲ್ಲಿ ಕಾರ್ಯಾಚರಿಸುತ್ತಿರುವ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು.ಸಾಮಾಜಿಕ ಹಾಗೂ ವೃತ್ತಿ ರಂಗದಲ್ಲಿ ಸಕ್ರಿಯರಾಗಿದ್ದ ಯುವಕನ ಅಕಾಲಿಕ ಅಗಲಿಕೆಗೆ ಸ್ಥಳೀಯರು, ಸ್ನೇಹಿತರು ಹಾಗೂ ಕಲ್ಲೇಗ ಜಮಾಅತ್ ಬಂಧುಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಪವಿತ್ರ ದಿನದಂದೇ ಯುವಕನ ದುರ್ಮರಣದಿಂದ ಇಡೀ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ.







