
ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿ ಫೈಜಲ್ ಎಂಬಾತ ಬೀಡಿ ಕೊಡುವಂತೆ ಒತ್ತಾಯಿಸಿ ಅಡುಗೆ ತಯಾರಿಗೆ ಅಡ್ಡಿ ಪಡಿಸಿದ ಘಟನೆ ವರದಿಯಾಗಿದೆ.ಫೈಜಲ್ ಸೆ. 14ರಂದು ಬೆಳಗ್ಗೆ ಸುಮಾರು 8:10 ಗಂಟೆಗೆ ಅಡುಗೆ ಮನೆ ಕಡೆಗೆ ಹೋಗಿ ಪಾಕಶಾಲೆಯಲ್ಲಿ ಕೆಲಸ ಮಾಡುವ ಬಂಧಿಗಳಿಗೆ ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿ ಮಾಡಬಾರದು ಎಂದು ಬೆದರಿಕೆ ಹಾಕುವ ಮೂಲಕ ಮಧ್ಯಾಹ್ನದ ಅಡುಗೆ ತಯಾರಿಗೆ ಅಡಚಣೆ ಉಂಟು ಮಾಡಿದ ಎನ್ನಲಾಗಿದೆ.





ಅನಂತರ ಸಹ ಬಂಧಿಗಳನ್ನು ಒಟ್ಟುಗೂಡಿಸಿ ಜೈಲು ಅಧೀಕ್ಷರ ಕಚೇರಿಗೆ ಬಂದು ನೀವು ಬೀಡಿ ಕೊಡುವರೆಗೂ ಅಡುಗೆ ತಯಾರಿಸಲು ಬಿಡುವುದಿಲ್ಲ. ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ದೊಡ್ಡ ಗಲಾಟೆ ಮಾಡಿ ನಿಮ್ಮನ್ನು ವರ್ಗಾವಣೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಜೈಲು ಅಧೀಕ್ಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಅಡುಗೆ ಮನೆಯ ಗೇಟ್ ಹಾಕಿದಾಗ ಅಲ್ಲಿಯೇ ಇರುವ ಸಿಲಿಂಡರ್ ನಿಂದ ಗೇಟ್ ಮತ್ತು ಬೀಗದ ಕೀ ಗೆ ಹೊಡೆದು ಬೀಗ ತೆರೆಯುವಂತೆ ಜೋರಾಗಿ ಕೂಗಾಡುತ್ತಾ ಗ್ಯಾಸ್ ಗಳನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಹ ಬಂಧಿಗಳನ್ನು ಒಟ್ಟು ಗೂಡಿಸಿಕೊಂಡು ಬೀಡಿ ಕೊಡುವವರೆಗೂ ಕೊಠಡಿಯೊಳಗೆ ತೆರಳದಂತೆ ಇತರ ಬಂಧಿಗಳನ್ನು ಪ್ರಚೋದಿಸಿ ಕಿರುಚಾಡುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.








