
ಪುತ್ತೂರು:ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಮೊಬೈಲ್ ಕರೆ,ವಾಟ್ಸಪ್ ಕರೆ ಮಾಡಿ ಪ್ರಕರಣವೊಂದರ ಕುರಿತು ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 9 ಲಕ್ಷ ರೂ.ವಸೂಲಿ ಮಾಡಿ ವಂಚಿಸಿರುವ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಈಶ್ವರಮಂಗಲದ ಪಿ.ನರಸಿಂಹ ಭಟ್(72ವ.)ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ,ತಾನು ಕೊಲೊಬಾ ಗ್ರೇಟರ್ ಮುಂಬೈನ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬಿಐ ಎಂದು ಹೇಳಿಕೊಂಡು ಮೊಬೈಲ್ಗೆ ವೀಡಿಯೋ ಕಾಲ್ ಮತ್ತು ವಾಟ್ಸಪ್ ಚಾಟ್ ಮಾಡಿ, ನೀವು ಮನಿ ಲ್ಯಾಂಡರಿಂಗ್, ಡ್ರಗ್ ಟ್ರಾಫಿಕಿಂಗ್ ಮತ್ತು ಐಡೆಂಟಿಟಿ ತೆಫ್ಟ್ ಕ್ರೈಮ್ ಮೂಲಕ ಅಕ್ರಮ ಹಣ ವರ್ಗಾವಣೆ ಮೂಲಕ ಸಂಪಾದಿಸಿದ ಹಣದಿಂದ ಆರ್ಡಿಎಕ್ಸ್ಗಳನ್ನು ಖರೀದಿ ಮಾಡಿ ದೇಶದ್ರೋಹಿ ಕೆಲಸಗಳಿಗೆ ಬಳಸುತ್ತಿರುವುದಾಗಿದ್ದು ಇದಕ್ಕಾಗಿ ನಿಮ್ಮನ್ನು ದಸ್ತಗಿರಿ ಮಾಡಿರುವುದಾಗಿ ಭಯಪಡಿಸಿ, ಎಲ್ಲಿಯೂ ಹೋಗದಂತೆ ತಡೆದು, ನೀವು ಆಜೀವ ಕಾರವಾಸ ಶಿಕ್ಷೆ ಇರುವ ದೇಶದ್ರೋಹದ ಕೆಲಸ ಮಾಡಿರುವುದಾಗಿ ಅವರನ್ನು ಭಯಗೊಳಿಸಿ, ಅವರಿಂದ 9 ಲಕ್ಷ ರೂ.ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾಗಿ ಆರೋಪಿಸಲಾಗಿದೆ.
ಈ ಕುರಿತು ಅವರು ನೀಡಿದ್ದ ದೂರಿನ ಮೇರೆಗೆ ದ.ಕ.ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಬಂಟ್ವಾಳ ಕೊಲ್ನಾಡು ಗ್ರಾಮದ ಕುಡ್ತಮುಗೇರು ಹೆಚ್.ಎಂ.ಶಾಫಿ ಎಂಬವರ ಮಗ ಜುಬೈರ್ ಎಂಬಾತನನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು,ಮೋಹಿನಿ ಕೆ.ವಾದಿಸಿದ್ದರು.








