
ಬೆಂಗಳೂರು: ಕರ್ನಾಟಕ ಸರಕಾರ ವಂಶವೃಕ್ಷ ದೃಢೀಕರಣ ಪತ್ರ ನೀಡುವ ಕುರಿತು ರಾಜ್ಯಾದ್ಯಂತ ಏಕೀಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸುತ್ತೋಲೆ ಹೊರಡಿಸಿದ್ದು, ಇನ್ನು ಮುಂದೆ ವಂಶವೃಕ್ಷ ದೃಢೀಕರಣ ಪತ್ರವನ್ನು ಆನ್ಲೈನ್ ತಂತ್ರಾಂಶದ ಮೂಲಕ ಮಾತ್ರ ನೀಡಲಾಗುವುದು.
ಅರ್ಜಿದಾರರು 100 ರೂ.ಛಾಪಾ ಕಾಗದದಲ್ಲಿ ನೋಟರಿ ದೃಢೀಕೃತ ಅಫಿಡವಿಟ್, ಆಧಾರ್ ಕಾರ್ಡ್ ಹಾಗೂ ಕುಟುಂಬದ ಸದಸ್ಯರ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ ಗ್ರಾಮ ಆಡಳಿತ ಅಧಿಕಾರಿಗಳು ಮನೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ, ಅಭಿಪ್ರಾಯವನ್ನು ರಾಜಸ್ವ ನಿರೀಕ್ಷಕರಿಗೆ ಶಿಫಾರಸು ಮಾಡಬೇಕು.
ನಂತರ ರಾಜಸ್ವ ನಿರೀಕ್ಷಕರು ವರದಿ ಪರಿಶೀಲಿಸಿ ಉಪ ತಹಶೀಲ್ದಾರರಿಗೆ ಶಿಫಾರಸು ಮಾಡಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಉಪ ತಹಶೀಲ್ದಾರರಿಗೇ ಸೀಮಿತವಾಗಿದೆ. ಅನುಮೋದನೆಗೊಂಡ ಅರ್ಜಿಗಳಿಗೆ ದೃಢೀಕರಣ ಪತ್ರವನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ.








