
ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಕುದ್ಮಾರು ನಿವಾಸಿ ಸುಚಿತ್ರಾ ಪಿ.ಜೆ. (38) ಅವರು ನೀಡಿದ ದೂರಿನಂತೆ, ಸುಮಾರು ನಾಲ್ಕು ವರ್ಷಗಳ ಹಿಂದೆ ಕುದ್ಮಾರು ನಿವಾಸಿ ಚಿದಾನಂದ ಕೆ. ಅವರೊಂದಿಗೆ ವಿವಾಹವಾಗಿದ್ದರು. ಸೆ.6ರಂದು ಬೆಳಗ್ಗೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದಿದ್ದು, ಈ ವೇಳೆ ಚಿದಾನಂದ ಕೆ. ಅವರು ಸುಚಿತ್ರಾ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಹಲ್ಲೆಯಿಂದ ಕುಸಿದುಬಿದ್ದ ಸುಚಿತ್ರಾ ಅವರನ್ನು ನೆರೆಮನೆಯವರು ಉಪಚರಿಸಿ, ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದೇ ವೇಳೆ ಪತ್ನಿಗೆ ಹಲ್ಲೆ ನಡೆಸಿದ ಆರೋಪದ ಬಳಿಕ ಚಿದಾನಂದ ಕೆ. ಅವರು ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 56/2026ರಂತೆ ಬಿಎನ್ಎಸ್ 2023ರ ಕಲಂ 85, 115(2), 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








