
ಮಂಗಳೂರು: 108 ಆ್ಯಂಬುಲೆನ್ಸ್ ನೌಕರರು ಸಾಮೂಹಿಕ ರಾಜೀನಾಮೆ ನೀಡುವ ಕುರಿತ ವಿಚಾರಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಮುಷ್ಕರ ಮಾಡಿ ರೋಗಿಗಳಿಗೆ ಸಮಸ್ಯೆ ಆದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಈ ಬಗ್ಗೆ ನಾನು ಸ್ಪಷ್ಟಪಡಿಸಿದ್ದೇನೆ. 108 ಆ್ಯಂಬುಲೆನ್ಸ್ಗಳ ಸಿಬ್ಬಂದಿ ನಮ್ಮ ಸಹೋದರರೇ. ಆದರೆ ಅವರಿಗಿಂತ ಮೊದಲು ರೋಗಿಗಳ ಯೋಗಕ್ಷೇಮ ನಮಗೆ ಮುಖ್ಯ ಮುಷ್ಕರ ಮಾಡಿ ರೋಗಗಳಿಗೆ ಸಮಸ್ಯೆ ಆದರೆ ಸುಮ್ಮನಿರಲಾಗದು ಎಂದು ಹೇಳಿದರು.
108 ಆ್ಯಂಬುಲೆನ್ಸ್ಗಳನ್ನು ನಿಭಾಯಿಸುವವರು ನಾವಲ್ಲ. ನೌಕರರ ನೇಮಕ, ಅವರ ಸಮವಸ್ತ್ರ ಸ್ವಚ್ಛತೆ, ತರಬೇತಿ ನೀಡುವ ಜವಾಬ್ದಾರಿ ಕಂಪನಿಗಳದ್ದು. ಚಾಲಕರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಕಂಪನಿ ಜತೆ ಅವರು ಮಾತುಕತೆ ನಡೆಸಬೇಕು. ಅವರು ನೇಮಕಾತಿ ಸಂದರ್ಭ ಸಹಿ ಹಾಕುವಾಗ ತಿಳಿಸಲಾದ ನಿಗದಿತ ವೇತನ ನೀಡದಿದ್ದರೆ ಸರಕಾರದ ಗಮನಕ್ಕೆ ತರಬೇಕು. ಹಾಗಾಗಿ ಈ ವಿಷಯದಲ್ಲಿ ನೌಕರರು ಪ್ರತಿಭಟನೆ ಮಾಡುತ್ತಾರೆಂದರೆ ನಮ್ಮದೇನು ಅಭ್ಯಂತರ ಇಲ್ಲ. ನಾವೇನಿದ್ದರೂ ಕಂಪನಿ ಜತೆ ಮಾತುಕತೆ ನಡೆಸಬೇಕಿದೆ. ಕಂಪನಿಗೆ ತಮ್ಮ ಚಾಲಕರು ಮತ್ತು ನಿರ್ವಾಹಕರನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಕಂಪನಿ ಬಿಟ್ಟು ಹೋಗಬೇಕು.
ಹೊಸ ಟೆಂಡರ್ ಕರೆಯಲಾಗುತ್ತಿದ್ದು, ಈ ನಡುವೆ ಆ್ಯಂಬುಲೆನ್ಸ್ ನೌಕರರು ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಆದಲ್ಲಿ, ಆ ಸಮಯದಲ್ಲಿ ಯಾರು ಆ್ಯಂಬುಲೆನ್ಸ್ನ ಜವಾಬ್ದಾರಿ ಹೊಂದಿರುತ್ತಾರೆ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದರು.








