
ಬೆಂಗಳೂರು : ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 5 ಹುಕ್ಕಾ ಪಾಟ್ಗಳು, 3 ಹುಕ್ಕಾಪೈಪ್ಗಳು, 2 ಬಾಕ್ಸ್ ಹುಕ್ಕಾ ಪಾಟ್, ಚಾರ್ ಕೋಲ್ಗಳನ್ನು ವಶಕ್ಕೆ ಪಡೆದಿದ್ದಾರೆ.ಬಸವೇಶ್ವರನಗರದ ಅಜಿತ್ ಬಿ. ನಾಯಕ್(28) ಮತ್ತು ಹಾಸನ ಮೂಲದ ವರುಣ(25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ.
ದೊಮ್ಮಲೂರುನಲ್ಲಿ ಸೀನಿಯರ್ ಅನಾಲಿಸ್ಟ್ ವೃತ್ತಿ ಮಾಡುತ್ತಿದ್ದ ಅಜಿತ್ ಬಿ. ನಾಯಕ್ ಹಾಗೂ ಬಿಬಿಎ ಪದವೀಧರನಾಗಿದ್ದು, ಸರ್ವೀಸ್ ಬಾಯ್ ಕೆಲಸ ಮಾಡುತ್ತಿದ್ದ ವರುಣ ಇವರಿಬ್ಬರೂ ಸೇರಿಕೊಂಡು ಹುಕ್ಕಾ ಬಾರ್ ತೆರೆದಿರುವುದು ವಿಚಾರಣೆಯಿಂದ ಗೊತ್ತಾಗಿದೆ.ಕೆಂಚನಪುರ ಗ್ರಾಮದಲ್ಲಿ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆಯೊಂದನ್ನು ಬಾಡಿಗೆಗೆ ಪಡೆದು ಇವರಿಬ್ಬರೂ ನಿಷೇಧಿತ ಹುಕ್ಕಾಬಾರ್ ತೆರೆದು ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಪೊಲೀಸರು ವಿವಿಧ ಆಯಾಮಗಳಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡ ಮಾಹಿತಿಗಳನ್ನು ಕಲೆ ಹಾಕಿ ಈ ಮನೆಯ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೆ ಮನೆ ಮಾಲಕರ ಪಾತ್ರದ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.








