ಉಡುಪಿ: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಿದ್ದ ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ಅನ್ನು ಅಪರಿಚಿತ ಅಪಹರಣಕಾರರು ದೋಚಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೃಷ್ಣನಂದನ ಎಂಬ ಲೈಲಾನ್ ಬೋಟ್ ನಲ್ಲಿ ಫೆ. 19ರಂದು ನಾಗರಾಜ್ ಹರಿಕಾಂತ, ನಾಗರಾಜ್ ಹೆಚ್. ಹರಿಕಾಂತ, ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಅವರು ಆಳ ಸಮುದ್ರಕ್ಕೆ ಮೀನು ಹಿಡಿಯಲು ತೆರಳಿರುತ್ತಾರೆ. ಫೆ. 27 ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಬೋಟ್ ನ ಬಲೆ ಫ್ಯಾನ್ ಗೆ ಬಿದ್ದ ಕಾರಣ ಬೋಟ್ ಬಂದ್ ಆಗಿ ನಿಂತಿದ್ದು,ಈ ಸಂದರ್ಭ ಸುಮಾರು 25 ಜನ ಅಪಹರಣಕಾರರು ಏಕಾಏಕಿ ಆಕ್ರಮಣ ಮಾಡಿ ಬೋಟ್ ಅನ್ನು ತೀರಕ್ಕೆ ಎಳೆದುಕೊಂಡು ಹೋಗಿದ್ದಾರೆ. ಮೀನುಗಾರರನ್ನು ಅಪಹರಿಸಿ ಬೋಟ್ ನಲ್ಲಿದ್ದ ಸುಮಾರು 8 ಲಕ್ಷ ಮೌಲ್ಯದ ಮೀನು ಹಾಗೂ ಬೋಟ್ ಗೆ ತುಂಬಿಸಿದ 5,76,700/- ಮೌಲ್ಯದ 7,500 ಲೀಟರ್ ಡೀಸೆಲ್ ದೋಚಿದ್ದಾರೆ. ಮೀನುಗಾರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಕೊಡವೂರು ಗ್ರಾಮ ನಿವಾಸಿ ಚೇತನ್ ಸಾಲಿಯಾನ್ ಅವರು ನೀಡಿರುವ ದೂರಿನ ಅನುಸಾರ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 395, 365, 342 ಜೊತೆಗೆ ಐಪಿಸಿ ಸೆಕ್ಷನ್ 149ರ ಅಡಿ ಪ್ರಕರಣ ದಾಖಲಾಗಿದೆ.