ಅಯೋಧ್ಯೆ ಶ್ರೀರಾಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದು, ದೇಶ ವಿದೇಶಗಳಿಂದ ಶ್ರೀರಾಮನ ಭಕ್ತರು ವಿಶೇಷ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ತೆಲಂಗಾಣದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿಯೂ ಒಬ್ಬರಾಗಿದ್ದಾರೆ.
64 ವರ್ಷದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಅವರು ಶ್ರೀರಾಮಂದಿರ ಪ್ರಾಣಪ್ರತಿಷ್ಠೆಗೂ ಮುನ್ನ ʻಚರಣ ಪಾದುಕೆʼಗಳನ್ನ ಹೊತ್ತು ಅಯೋಧ್ಯೆಗೆ 7,200 ಕಿಮೀ ಪಾದಯಾತ್ರೆ ಕೈಗೊಂಡಿದ್ದಾರೆ. ವಿಶೇಷವೆಂದರೆ ಶ್ರೀರಾಮ ನಡೆದಾಡಿದ ರಸ್ತೆಯಲ್ಲೇ ಪಾದಯಾತ್ರೆ ಕೈಗೊಂಡಿದ್ದಾರೆ. ಅಂದು ಯಾವ ಮಾರ್ಗದ ಮೂಲಕ ಅಯೋಧ್ಯೆಯಿಂದ ರಾಮೇಶ್ವರ ತಲುಪಿದ್ದಾರೆ ಅದೇ ರಸ್ತೆಗಳಲ್ಲಿ ತೆರಳಿ ರಾಮಮಂದಿರಕ್ಕೆ ವಿಶೇಷ ಕಾಣಿಕೆ ಅರ್ಪಿಸಲು ಮುಂದಾಗಿದ್ದಾರೆ.
ಈಗಾಗಲೇ ಪಾದಯಾತ್ರೆ ಆರಂಭಿಸಿದ್ದು, 8 ಕೆಜಿ ಬೆಳ್ಳಿ ಬಳಸಿ ಸಿದ್ಧಪಡಿಸಲಾದ ಚರಣ ಪಾದುಕೆಯನ್ನು ರಾಮಮಂದಿರಕ್ಕೆ ತಲುಪಿಸಲು ಮುಂದಾಗಿದ್ದಾರೆ. ಜನವರಿ 15 ಅಥವಾ 16 ರಂದು ಪಾದುಕೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಾಮಭಕ್ತ ಚಲ್ಲಾ ಶ್ರೀನಿವಾಸ ಶಾಸ್ತ್ರಿ, 8 ಕೆಜಿ ಬೆಳ್ಳಿಯಿಂದ ತಯಾರಿಸಲಾದ ಚರಣ ಪಾದುಕೆಗಳಿಗೆ ಚಿನ್ನದ ಲೇಪನ ಮಾಡಿಸಿದ್ದೇನೆ. ಅಯೋಧ್ಯೆಯಿಂದ ರಾಮೇಶ್ವರಕ್ಕೆ ಭಗವಾನ್ ಶ್ರೀರಾಮ ಸಾಗಿದ ಮಾರ್ಗದಲ್ಲೇ ನಾನೂ ನಡೆಯುತ್ತೇನೆ. ಒಟ್ಟಿನಲ್ಲಿ ನನ್ನ ಗುರಿ ಪ್ರಾಣಪ್ರತಿಷ್ಠೆಗೂ ಮುನ್ನ ಅಯೋಧ್ಯೆ ತಲುಪಬೇಕು ಅನ್ನೋದಷ್ಟೇ. ಜನವರಿ 15 ಅಥವಾ 16ರ ವೇಳೆಗೆ ತಲುಪಿ, ಈ ಕಾಣಿಕೆಗಳನ್ನು ಅರ್ಪಿಸುತ್ತೇನೆ. ಅಲ್ಲದೇ ದಕ್ಷಿಣ ಭಾರತದಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ, 10 ಸಾವಿರ ಲಡ್ಡು ವಿತರಿಸಲಿದ್ದೇವೆ ಎಂದು ಹೇಳಿದ್ದಾರೆ.