
ಪುತ್ತೂರು: ಇಲ್ಲಿನ ಬನ್ನೂರು ನಿವಾಸಿ, ಕಳೆದ ಕೆಲ ವರ್ಷಗಳ ಹಿಂದೆ ಶಿಕ್ಷಕರಿಗಾಗಿ ಪ್ರತಿಭಟಿಸಿ ರಾಜ್ಯ ಸರ್ಕಾರದ ಗೃಹ ಸಚಿವರ ಗಮನ ಸೆಳೆದಿದ್ದ, ಪ್ರಸ್ತುತ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದಿವಿತ್ ರೈ ಅವರು ಬರೆದ ಇಂಗ್ಲಿಷ್ ಕವನವೊಂದು 8ನೇ ತರಗತಿಯ ಪಠ್ಯದಲ್ಲಿ ಪ್ರಕಟವಾಗಿದ್ದು, ಮಕ್ಕಳಿಗೆ ಪಠ್ಯವಾಗಿದೆ.
ದಿವಿತ್ ಅವರು 10 ನೇ ತರಗತಿಯಲ್ಲಿದ್ದಾಗ ಪ್ರಕಟಿಸಿದ್ದ ‘ಸಿಂಪಲ್ ಲೈಫ್’ ಎಂಬ ಇಂಗ್ಲಿಷ್ ಕವನ ಸಂಕಲನದಿಂದ ಆಯ್ದ ‘ಮದರ್ ಅರ್ಥ್’ ಎಂಬ ಕವನವನ್ನು ಪಠ್ಯವಾಗಿ ಆಯ್ಕೆ ಮಾಡಲಾಗಿದೆ.
ದಿವಿತ್ ಹಾರಾಡಿ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಆರನೇ ತರಗತಿಯಲ್ಲಿ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ಐವರು ಶಿಕ್ಷಕರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದನ್ನು ಖಂಡಿಸಿ ಪ್ರತಿಭಟಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಅಂದಿನ ಗೃಹ ಸಚಿವ ಜಿ.ಪರಮೇಶ್ವರ್ ದಿವಿತ್ ನ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದ್ದರಲ್ಲದೇ, ಶಾಲಾ ವಾರ್ಷಿಕೋತ್ಸವದಲ್ಲಿ ಕೋರಿಕೆಯ ಮೇರೆಗೆ ಭಾಗವಹಿಸಿ ಶಾಲಾ ಕೊಠಡಿಗೆ 10 ಲಕ್ಷ ಅನುದಾನ ಮಂಜೂರು ಮಾಡಿದ್ದರು.
