ಬಂಟ್ವಾಳ ತಾಲೂಕಿನ ಮಂಚಿ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಸಮಯದಲ್ಲಿ ಶಾಲಾ ಮಕ್ಕಳೊಂದಿಗೆ ಸರಕಾರಿ ಶಾಲಾ ಶಿಕ್ಷಕಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜಯ ಘೋಷ ಹಾಕುತ್ತಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೂ ಜೈಕಾರ ಹಾಕುತ್ತಿದ್ದನ್ನು ಸ್ಥಳೀಯ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಾಲೆಯ ಮುಸ್ಲಿಂ ಪೋಷಕರು ಮತ್ತು ಕೆಲವು ರಾಜಕಾರಣಿಗಳು ಶಿಕ್ಷಕಿಗೆ ಒತ್ತಡ ತಂದು ಕ್ಷಮೆಯಾಚಿಸಿದ್ದು, ಶಿಕ್ಷಕಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೆ ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸುತ್ತದೆ ಮತ್ತು ಸರಕಾರಿ ಶಾಲೆಯಲ್ಲಿ ಪೋಷಕರ ನೆಪವಾಗಿಟ್ಟುಕೊಂಡು ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಮತಾಂಧರನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂ.ಜಾ.ವೇ ಎಚ್ಚರಿಕೆಯನ್ನು ನೀಡಿದೆ.
ಏನಿದು ಪ್ರಕರಣ..?
ಸ್ವಾತಂತ್ರೋತ್ಸವ ದಿನ ಮಂಚಿ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಜಯ ಘೋಷ ಹಾಕುತ್ತಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೂ ಜಯ ಘೋಷ ಹಾಕುತ್ತಿದ್ದನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಶೀರ್ ಎಂಬಾತ ವಿಡಿಯೋ ಮಾಡಿ ವೈರಲ್ ಮಾಡಿದ್ದ. ಬಳಿಕ ಈ ಕುರಿತು ಕೆಲ ಮುಸ್ಲಿಂ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗುರುವಾರ ಮಧ್ಯಾಹ್ನ ಶಾಲೆಯಲ್ಲಿ ಶಿಕ್ಷಕ- ಪೋಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿಯೂ ಪೋಷಕರು, ವೀರ ಸಾವರ್ಕ್ರಗೆ ಜೈಕಾರ ಹಾಕಿಸಿದ ವಿಷಯ ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಶಿಕ್ಷಕಿ ಕ್ಷಮೆಯಾಚಿಸಿದ್ದಾರೆ.
ಶಾಲೆಯಲ್ಲಿ ನಡೆದ ಕಾರ್ಯಕ್ರಮ ಚಿತ್ರೀಕರಣ ಮಾಡಿ ವೈರಲ್ ಮಾಡಿರುವುದನ್ನು ಆಕ್ಷೇಪಿಸಿ ಮುಖ್ಯ ಶಿಕ್ಷಕರು ಬಶೀರ್ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.